ಬೆಳಗಾವಿ: ಮದುವೆಯಾದ ಖುಷಿಗೆ ಯುವಕನೊಬ್ಬ ತನ್ನ ಸ್ನೇಹಿತರಿಗೆ ಎಣ್ಣೆ ಹಾಗೂ ನಾನ್ ವೆಜ್ ಪಾರ್ಟಿ ಇಟ್ಟುಕೊಂಡಿದ್ದ. ಈ ಪಾರ್ಟಿಯಲ್ಲಿ ಚಿಕನ್ ಪೀಸ್ ಜಾಸ್ತಿ ಹಾಕಲಿಲ್ಲ ಅಂತಾ ಸಣ್ಣ ಕಾರಣಕ್ಕೆ ಶುರುವಾದ ಜಗಳ ಯುವಕನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಯರಗಟ್ಟಿ ಪಟ್ಟಣದ ಹೊರ ವಲಯದಲ್ಲಿ ನಡೆದಿದೆ.
ಯರಗಟ್ಟಿಯ ವಿನೋದ ಮಲಶೆಟ್ಟಿ(25) ಕೊಲೆಯಾದ ಯುವಕ. ವಿನೋದ ಸ್ನೇಹಿತ ಅಭಿಷೇಕ ಕೊಪ್ಪದ ಅವರ ಮದುವೆ ಎರಡು ತಿಂಗಳ ಹಿಂದೆಯಷ್ಟೇ ಆಗಿತ್ತು. ಅಂದಿನಿಂದ ಆತನ ಸ್ನೇಹಿತರು ಪಾರ್ಟಿ ಕೊಡಿಸುವಂತೆ ದುಂಬಾಲು ಬಿದ್ದಿದ್ದರು. ನಿನ್ನೆ ಭಾನುವಾರ ರಜೆ ಹಿನ್ನೆಲೆಯಲ್ಲಿ ಯರಗಟ್ಟಿ ಪಟ್ಟಣದ ಹೊರ ವಲಯದಲ್ಲಿರುವ ಸೊಪ್ಪಡ್ಲ ಗ್ರಾಮದ ಬಳಿಯ ತೋಟದಲ್ಲಿ 30ಕ್ಕೂ ಹೆಚ್ಚು ಸ್ನೇಹಿತರನ್ನು ಅಭಿಷೇಕ ಪಾರ್ಟಿಗೆ ಆಹ್ವಾನಿಸಿದ್ದ. ಈ ವೇಳೆ, ವಿಠ್ಠಲ ಹಾರೂಗೊಪ್ಪ ಜತೆಗೆ ವಿನೋದ ಮಲಶೆಟ್ಟಿ ಚಿಕನ್ ಪೀಸ್ ಗಾಗಿ ಜಗಳ ತೆಗೆದಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿದೆ. ಆ ವೇಳೆ ಅಲ್ಲಿಯೇ ಅಡುಗೆ ಮಾಡಲು ತಂದಿದ್ದ ಚಾಕುವಿನಿಂದ ಆರೋಪಿ ವಿಠ್ಠಲ ವಿನೋದ್ ಎದೆಗೆ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ವಿನೋದ್ ಉಸಿರು ಚೆಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ: ಘಟನಾ ಸ್ಥಳಕ್ಕೆ ಮುರಗೋಡ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಸರಗಿ ಅವರು ಕೂಡ ಸ್ಥಳಕ್ಕೆ ದೌಡಾಯಿಸಿ ಮಾಹಿತಿ ಪಡೆದರು. ತೋಟದ ಮನೆಯಲ್ಲಿ ಚೆಲ್ಲಾಪಿಲ್ಲಿಯಾಗಿ ವಸ್ತುಗಳ ಬಿದ್ದಿದ್ದವು. ಕೇವಲ ಚಿಕನ್ ಪೀಸ್ ಗಾಗಿ ಜಗಳ ನಡೆದಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಆರೋಪಿ ವಿಠ್ಠಲ್ ಹಾರುಗೊಪ್ಪನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನೂ ಕೊಲೆಗೆ ಕೇವಲ ಚಿಕನ್ ವಿಷಯವೇ ಕಾರಣನಾ ಅಥವಾ ಬೇರೆ ಏನಾದರೂ ವೈಯಕ್ತಿಕ ವೈಷಮ್ಯ ಇತ್ತಾ ಎಂಬ ಬಗ್ಗೆಯೂ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಪ್ರಕರಣದ ಬಗ್ಗೆ ಎಸ್ಪಿ ಗುಳೇದ ಮಾಹಿತಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ನೂರಕ್ಕೂ ಅಧಿಕ ಜನರು ಪಾರ್ಟಿಯಲ್ಲಿ ಊಟ ಮುಗಿಸಿಕೊಂಡು ಹೋಗಿದ್ದರು. ಕೊನೆಗೆ ಏಳೆಂಟು ಜನ ಉಳಿದಿರುತ್ತಾರೆ. ಆಗ ಊಟ ಬಡಿಸುವಾಗ ವಿಠ್ಠಲನಿಗೆ ನನಗೆ ಚಿಕನ್ ಸರಿಯಾಗಿ ಹಾಕಿಲ್ಲ ಅಂತಾ ವಿನೋದ ಬೈಯ್ಯುತ್ತಾನೆ. ಮಾತಿಗೆ ಮಾತು ಬೆಳೆದು ಗಲಾಟೆ ಶುರುವಾಗುತ್ತದೆ. ಆಗ ವಿಠ್ಠಲ ವಿನೋದನ ಎದೆಗೆ ಚಾಕುವಿನಿಂದ ಚುಚ್ಚುತ್ತಾನೆ. ಇದರಿಂದ ಬಹುಶಃ ಆತನ ಹೃದಯಕ್ಕೆ ಗಾಯವಾಗಿ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಪ್ರಕರಣ ಸಂಬಂಧ ಆರೋಪಿ ವಿಠಲ ಬಂಧನವಾಗಿದ್ದು, ಹೆಚ್ಚಿನ ತನಿಖೆಗೆ ಒಳಪಡಿಸಿ ಕಾನೂನು ಪ್ರಕಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುತ್ತೇವೆ ಎಂದು ಹೇಳಿದರು.