ನವದೆಹಲಿ: ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಭವಿಷ್ಯದಲ್ಲಿ INDIA ಒಕ್ಕೂಟವನ್ನು ಸೇರಬಹುದು ಎಂದು ಕೇಂದ್ರದ ಮಾಜಿ ಹಣಕಾಸು ಸಚಿವ, ಕಾಂಗ್ರೆಸ್ ನಾಯಕ ಪಿ ಚಿದಂಬರಂ ಆಶಾವಾದ ವ್ಯಕ್ತಪಡಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು ವಿಜಯ್ ಅವರ ಟಿವಿಕೆ ಪಕ್ಷವನ್ನು ಕೂಡ ‘ಇಂಡಿಯಾ’ ಕೂಟಕ್ಕೆ ಸೇರಲು ಮನವೊಲಿಸಬೇಕು ಎಂಬುದು ನನ್ನ ಆಸೆ ಎಂದು ಹೇಳಿದ್ದಾರೆ.
ಸ್ಟಾಲಿನ್ ಅವರು ಕಾಂಗ್ರೆಸ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆಯೇ ಹೊರತು ಇಲ್ಲಿಯವರೆಗೆ ಇಂಡಿಯಾ ಕೂಟದ ಬಗ್ಗೆ ನಕಾರಾತ್ಮಕವಾಗಿ ಮಾತನಾಡಿಲ್ಲ. ಆದ್ದರಿಂದ ಅವರು ಮೈತ್ರಿಯಲ್ಲೇ ಉಳಿಯುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ತಿಳಿಸಿದರು.
ರಾಜ್ಯ ಮಟ್ಟದಲ್ಲಿ ನಾವು ಪರಸ್ಪರ ಎದುರಾಳಿಗಳಾಗಿದ್ದರೂ ರಾಷ್ಟ್ರಮಟ್ಟದಲ್ಲಿ ಇಂಡಿಯಾ ಕೂಟದಲ್ಲಿ ಜೊತೆಯಾಗಿರಬಹುದು. ಇದಕ್ಕೆ ಕೇರಳದ ಸಿಪಿಎಂ ಮತ್ತು ಪಶ್ಚಿಮ ಬಂಗಾಳದ ಟಿಎಂಸಿ ಉದಾಹರಣೆಗಳಾಗಿವೆ ಎಂದರು.
ಎಂಕೆ ಸ್ಟಾಲಿನ್ ಶನಿವಾರ ಎಕ್ಸ್ನಲ್ಲಿ ಪೋಸ್ಟ್ ಮಾಡಿ ವಿಜಯ್ ಅವರನ್ನು ಬೆಂಬಲಿಸುವ ಮೊದಲು ಕಾಂಗ್ರೆಸ್ ತನ್ನೊಂದಿಗೆ ಸಮಾಲೋಚಿಸಲಿಲ್ಲ ಎಂದು ದೂರಿದ್ದರು.
ಮೈತ್ರಿಕೂಟದ ಪರವಾಗಿ ಸ್ಪರ್ಧಿಸಿ ಗೆದ್ದ ಕಾಂಗ್ರೆಸ್ ಶಾಸಕರು ಡಿಎಂಕೆ ಪ್ರದಾನ ಕಚೇರಿ ಅಣ್ಣಾ ಅರಿವಲಯಂಗೆ ಕೃತಜ್ಞತೆ ಸಲ್ಲಿಸಲು ಬರಲಿಲ್ಲ. ಆದರೆ ಕಮ್ಯುನಿಸ್ಟ್ ನಾಯಕರಾದ ಕಾಮ್ರೇಡ್ ಷಣ್ಮುಗಂ ಮತ್ತು ಕಾಮ್ರೇಡ್ ವೀರಪಾಂಡ್ಯನ್, ವಿದುತಲೈ ಚಿರುತೈಗಲ್ ಕಚ್ಚಿ ಪಕ್ಷದ ನಾಯಕ ತಿರುಮಾವಲವನ್ ಅವರೊಂದಿಗೆ, ಡಿಎಂಕೆ ಜೊತೆ ಕೈಜೋಡಿಸುವುದನ್ನು ಮುಂದುವರಿಸುವುದಾಗಿ ಮತ್ತು ತಮಿಳುನಾಡಿನ ಹಕ್ಕುಗಳು ಮತ್ತು ಜನರ ಕಲ್ಯಾಣಕ್ಕಾಗಿ ಹೋರಾಡುವುದಾಗಿ ಘೋಷಿಸಿದ್ದಾರೆ ಎಂದು ಬರೆದಿದ್ದರು.
22 ಸಂಸದರನ್ನು ಹೊಂದಿರುವ ಡಿಎಂಕೆ INDIA ಮೈತ್ರಿಕೂಟದ ನಾಲ್ಕನೇ ಅತಿದೊಡ್ಡ ಪಕ್ಷವಾಗಿದೆ. ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ 59 ಸ್ಥಾನಗಳನ್ನು ಗೆದ್ದರೆ ಕಾಂಗ್ರೆಸ್ 5 ಸ್ಥಾನಗಳನ್ನು ಗೆದ್ದುಕೊಂಡಿದೆ.
Laxmi News 24×7