ಹುಬ್ಬಳ್ಳಿ: “ರಾಜ್ಯ ಸರ್ಕಾರದ ನಡೆ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ನಾನು ಪರಿಸ್ಥಿತಿಗೆ ಒಳಗಾಗಿ ರಾಜೀನಾಮೆ ನೀಡಿದ್ದೇನೆ. ಅವರಿಗೆ ನನ್ನ ಮೇಲೆ ನಂಬಿಕೆ ಇಲ್ಲ ಅಂದರೆ ಅಲ್ಲಿ ಇರೋದು ಸರಿಯಲ್ಲ ಅನ್ನಿಸಿತು. ಇನ್ನು ಮುಂದೆ ಸಾಮಾನ್ಯ ಸದಸ್ಯನಾಗಿ ಸದನದಲ್ಲಿ ಭಾಗವಹಿಸುತ್ತೇನೆ” ಎಂದು ವಿಧಾನ ಪರಿಷತ್ನ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾನೇನು ತಪ್ಪು ಮಾಡಿದ್ದೇನೆ?, ಭ್ರಷ್ಟಾಚಾರ ಮಾಡಿದ್ದೀನಾ? ಅವ್ಯವಹಾರ ಮಾಡಿದ್ದೀನಾ? ಅವಿಶ್ವಾಸ ಮಂಡನೆ ಮಾಡಲು ಅವರ ಹತ್ತಿರ ವಿಷಯವೇ ಇಲ್ಲ. ನಾನು ಸಿಎಂ ಮನೆಗೆ ಹೋಗಿದ್ದು ನಿಜ. ಆದರೆ ನಾನು ಹೋಗಬಾರದಿತ್ತು. ಹೋಗಿದ್ದು ನನ್ನ ತಪ್ಪು. ಪಕ್ಷದ ಹೈಕಮಾಂಡ್ ತಮ್ಮ ಲೆಟರ್ ಹೆಡ್ನಲ್ಲಿ ಸಭಾಪತಿ ಘೋಷಣೆ ಮಾಡಿದ್ದು ಇಡೀ ದೇಶದಲ್ಲೇ ಮೊದಲು. ಇದು ತಪ್ಪು. ಈ ರೀತಿಯ ನಡೆ ಸರಿಯಲ್ಲ” ಎಂದರು.”ಕಾಂಗ್ರೆಸ್ನಲ್ಲಿ ಯಾರಿಗೂ ನನ್ನ ಮೇಲೆ ಅಪನಂಬಿಕೆ ಇಲ್ಲ. ಒಳ್ಳೆಯ ಅಭಿಪ್ರಾಯವಿದೆ. ನನ್ನ ರಾಜೀನಾಮೆ ಬಗ್ಗೆ ಈಗಾಗಲೇ ಸಿಎಂ ಜೊತೆಗೆ ಮಾತನಾಡಿದ್ದೆ. 14ರಂದು ರಾಜೀನಾಮೆ ಹೇಗೆ ಕೊಡಬೇಕು ಅಂತ ಸಿಎಂ ಜೊತೆಗೆ ಒಪ್ಪಂದ ಆಗಿತ್ತು. ಆದರೆ ಸಿಎಂ 7ನೇ ತಾರೀಕಿನಂದೇ ರಾಜೀನಾಮೆ ನೀಡಬೇಕು ಅಂತ ಒತ್ತಡ ಹಾಕಿದರು. ನಾನು 14ಕ್ಕೆ ರಾಜೀನಾಮೆ ನೀಡುವೆ ಅಂತ ಹೇಳಿದೆ. ಆದರೆ ಸಿಎಂ ಸಾಕಷ್ಟು ಒತ್ತಡ ಹಾಕಿದರು. ಅದಕ್ಕೆ ಬಲವಂತವಾಗಿ ರಾಜೀನಾಮೆ ನೀಡಿದ್ದೇನೆ. ಈ ಹಿಂದೆ ನಾನು ಆಸ್ಪತ್ರೆ ಬೆಡ್ ಮೇಲೆ ಇದ್ದಾಗಲೇ ಸಿಎಂ ಫೋನ್ ಮಾಡಿ ಸಾಕಷ್ಟು ಒತ್ತಾಯ ಹಾಕಿದ್ದರು” ಎಂದರು.
Laxmi News 24×7