ಶಿವಮೊಗ್ಗ: ಕಳೆದ ಒಂದೆರಡು ವರ್ಷಗಳಿಂದ ತಣ್ಣಗಿದ್ದ ಮಲೆನಾಡು ಶಿವಮೊಗ್ಗದಲ್ಲಿ ರೌಡಿಗಳ ಗ್ಯಾಂಗ್ವಾರ್ ಮತ್ತೆ ಮುನ್ನೆಲೆಗೆ ಬಂದಿದೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ರೌಡಿಶೀಟರ್ ಒಬ್ಬನನ್ನು ಎದುರಾಳಿ ಗ್ಯಾಂಗ್ ಭೀಕರವಾಗಿ ಹತ್ಯೆ ಮಾಡಿದೆ. ಹಾಡಹಗಲೇ ನಡೆದ ಈ ಗ್ಯಾಂಗ್ವಾರ್ನಿಂದ ಶಿವಮೊಗ್ಗದ ಜನತೆ ಬೆಚ್ಚಿಬಿದ್ದಿದೆ.
ಶಿವಮೊಗ್ಗ ನಗರದಲ್ಲಿ ಮತ್ತೆ ರಕ್ತದೋಕುಳಿ ಹರಿದಿದೆ. ಗ್ಯಾಂಗ್ವಾರ್ಗೆ ರೌಡಿಶೀಟರ್ ಬಲಿಯಾಗಿದ್ದಾನೆ. ಶಿವಮೊಗ್ಗದ ಗಾಂಧಿ ಬಜಾರ್ನ 1ನೇ ಕ್ರಾಸ್ನ ಕರಿದೇವರ ಕೇರಿಯಲ್ಲಿ ರೌಡಿಶೀಟರ್, ಇಸ್ಪಿಟ್ ಗ್ಯಾಂಬ್ಲರ್ ನರಸಿಂಹ ಹತ್ಯೆಯಾಗಿದ್ದಾನೆ. ಗೋವಿಂದಾಪುರ ಆಶ್ರಯ ಬಡಾವಣೆ ನಿವಾಸಿಯಾದ ರೌಡಿಶೀಟರ್ ನರಸಿಂಹನನ್ನ ಎದುರಾಳಿ ಗ್ಯಾಂಗ್ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದೆ. ನರಸಿಂಹನ ತಲೆ ಮತ್ತು ಕೈ ಭಾಗಕ್ಕೆ ಮಾರಕಾಸ್ತ್ರಗಳಿಂದ ಮನಸೋಇಚ್ಛೆ ದಾಳಿ ನಡೆಸಿದೆ.
ದಾಳಿಯ ತೀವ್ರತೆಗೆ ನರಸಿಂಹನ ಕೈಗಳು ತುಂಡಾಗಿದ್ದರೇ, ಮುಖ ಗುರುತು ಸಿಗದಂತಾಗಿದೆ. ಹಳೆಯ ದ್ವೇಷ ಮತ್ತು ರೌಡಿಗಳ ಗ್ಯಾಂಗ್ ನಡುವಿನ ವೈಷಮ್ಯವೇ ಈ ಭೀಕರ ಹತ್ಯೆಗೆ ಕಾರಣ ಎನ್ನಲಾಗಿದೆ. ಸದ್ಯ ನರಸಿಂಹನ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಮೆಗ್ಗಾನ್ ಶವಾಗಾರಕ್ಕೆ ಶಿಫ್ಟ್ ಮಾಡಲಾಗಿದೆ.
ಈ ಕುರಿತು ಹತ್ಯೆಯಾದ ರೌಡಿಶೀಟರ್ ಪತ್ನಿ ಸ್ನೇಹಾ ಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ರೌಡಿಗಳ ಗ್ಯಾಂಗ್ ನಡುವಿನ ವೈಷಮ್ಯವೇ ಕಾರಣ. ಅಂಬು ಮತ್ತು ಆತನ ಟೀಮ್ ಈ ಕೊಲೆ ಮಾಡಿದೆ ಎಂದು ದೂರು ನೀಡಿದ್ದಾರೆ. ಆರೋಪಿಗಳ ಪತ್ತೆಗೆ ಮೂರು ಪ್ರತ್ಯೇಕ ತಂಡ ರಚನೆ ಮಾಡಲಾಗಿದ್ದು, ಸದ್ಯದಲ್ಲೇ ಎಲ್ಲರನ್ನೂ ಬಂಧಿಸುತ್ತೇವೆ ಎಂದು ಎಎಸ್ಪಿ ಕಾರ್ಯಪ್ಪ ಪ್ರತಿಕ್ರಿಯಿಸಿದ್ದಾರೆ.
ಶಿವಮೊಗ್ಗದಲ್ಲಿ ರೌಡಿಗಳ ನಡುವಿನ ಗ್ಯಾಂಗ್ ವಾರ್ ಇಂದು ನಿನ್ನೆಯದಲ್ಲ. ಹಲವು ದಶಕಗಳಿಂದಲೂ ರೌಡಿಗಳ ನಡುವೆ ಗಲಾಟೆ ನಡೆಯುತ್ತಲಿವೆ. ಅದರಂತೆ ಹಂದಿ ಅಣ್ಣಿ ಗ್ಯಾಂಗ್ ಹಾಗೂ ಕಾಡಾ ಕಾರ್ತಿಕ್ ಗ್ಯಾಂಗ್ ನಡುವೆ ಆಗಾಗ್ಗೆ ಗಲಾಟೆಯಾಗುತ್ತಿತ್ತು. ಅದರಂತೆ ಎರಡು ವರ್ಷದ ಹಿಂದೆ ಹಂದಿ ಅಣ್ಣಿಯನ್ನ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಇದರ ನಂತರ ಹಂದಿ ಅಣ್ಣಿಯ ಸಹಚರನಾಗಿದ್ದ ಅನಿಲ್@ಅಂಬುವನ್ನ ಕೂಡ ಬಿಡಲ್ಲ, ಆತನನ್ನು ಮುಗಿಸುವುದಾಗಿ ಇದೇ ಇಸ್ಪಿಟ್ ಗ್ಯಾಂಬ್ಲರ್ ನರಸಿಂಹ ಎಲ್ಲೆಡೆ ಹೇಳಿಕೊಂಡು ಓಡಾಡುತ್ತಿದ್ದ ಎನ್ನಲಾಗಿದೆ. ಇದನ್ನೇ ನೆಪವಾಗಿಟ್ಟುಕೊಂಡ ಅಂಬು&ಟೀಂ ನರಸಿಂಹನಿಗೆ ಸ್ಕೆಚ್ ಹಾಕಿ ಮುಗಿಸಿದ್ದಾರೆ ಎನ್ನಲಾಗಿದೆ.
ಹತ್ಯೆಯಾದ ರೌಡಿಶೀಟರ್ ನರಸಿಂಹನ ವಿರುದ್ಧ ಶಿವಮೊಗ್ಗದ ಠಾಣೆಯಲ್ಲಿ ಇಸ್ಪಿಟ್, ಗ್ಯಾಂಬ್ಲಿಂಗ್, ಗಾಂಜಾ ದಂಧೆ ಹಾಗೂ ಮರ್ಡರ್ ಕೇಸ್ ಸೇರಿದಂತೆ ಹಲವು ಕೇಸ್ಗಳಿದ್ದವು. ಸದ್ಯ ಪೊಲೀಸರು ಹಂತಕರಿಗೆ ಬಲೆ ಬೀಸಿದ್ದಾರೆ.
Laxmi News 24×7