ಬೆಳಗಾವಿ : ಉತ್ತರ ವಲಯ ನೂತನ ಪೊಲೀಸ್ ಮಹಾನಿರೀಕ್ಷಕರಾಗಿ ಹಿರಿಯ ಐಪಿಎಸ್ ಅಧಿಕಾರಿ ಸಂದೀಪ ಪಾಟೀಲ ಗುರುವಾರ ಇಲ್ಲಿನ ಕೇಂದ್ರ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು. ಈವರೆಗಿನ ಉತ್ತರ ವಲಯ ಐಜಿಪಿ ಡಾ.ಚೇತನಸಿಂಗ್ ರಾಥೋರ್, ಪಾಟೀಲರಿಗೆ ಅಧಿಕಾರ ಹಸ್ತಾಂತರಿಸಿದರು.
ಬಳಿಕ ಉತ್ತರ ವಲಯದ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಕಾನೂನು-ಸುವ್ಯವಸ್ಥೆ, ಅಪರಾಧ ನಿಯಂತ್ರಣ, ಗಡಿ ಭಾಗದ ಭದ್ರತಾ ವ್ಯವಸ್ಥೆ ಹಾಗೂ ಪ್ರಮುಖ ಪ್ರಕರಣಗಳ ಕುರಿತು ಪ್ರಾಥಮಿಕ ಮಾಹಿತಿ ಪಡೆದುಕೊಂಡ ಸಂದೀಪ ಪಾಟೀಲ, ಅಧೀನ ಅಧಿಕಾರಿ ಮತ್ತು ಸಿಬ್ಬಂದಿಗಳ ಪರಿಚಯ ಮಾಡಿಕೊಂಡರು.
ಈ ಹಿಂದೆ ಬೆಳಗಾವಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸಂದೀಪ ಪಾಟೀಲ ಉತ್ತರ ಕರ್ನಾಟಕ ಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಹೀಗಾಗಿ, ಇಂಥವರು ಮಹಾರಾಷ್ಟ್ರ ಮತ್ತು ಗೋವಾ ಗಡಿಗೆ ಹೊಂದಿಕೊಂಡಿರುವ ರಾಜ್ಯದ ಅತ್ಯಂತ ಸೂಕ್ಷ್ಮ ವಲಯಕ್ಕೆ ಐಜಿಪಿಯಾಗಿ ಬಂದಿರುವುದರಿಂದ ಅನುಭವ ಸಂಪನ್ನ ಅಧಿಕಾರಿ ಎಂಬ ಕಾರಣಕ್ಕೆ ಇವರ ನೇಮಕ ಮಹತ್ವ ಪಡೆದುಕೊಂಡಿದೆ.
Laxmi News 24×7