ಬೆಳಗಾವಿ :ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಭರ್ತಿ ಮಾಡಿದ ಅರ್ಜಿಯನ್ನು ವಾಪಸ್ ನೀಡದಿದ್ದರೆ ಮತದಾರರ ಪಟ್ಟಿಯಿಂದಲೇ ಹೆಸರು ತೆಗೆದು ಹಾಕಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ಕಾರ್ತಿಕ್,ಎಂ. ಎಚ್ಚರಿಕೆ ನೀಡಿದ್ದಾರೆ.
ನಗರದ ಪಾಲಿಕೆ ಕಚೇರಿ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಎಸ್ಐಆರ್ ಶೇ.100ರಷ್ಟು ಪೂರ್ಣಗೊಳಿಸಿರುವ ಬೂತ ಮಟ್ಟದ ಅಧಿಕಾರಿ (ಬಿಎಲ್ಒ) ಸತೀಶ ಡವಳೆ, ಎಸ್.ಜಿ.ಕವಳೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಬೆಳಗಾವಿ ದಕ್ಷಿಣ ಮತ್ತು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಮನೆ ಮನೆಗೆ ತೆರಳಿ ಎಸ್ಐಆರ್ ಅರ್ಜಿಗಳನ್ನು ನೀಡಲಾಗಿದೆ. ಆದರೆ, ಅರ್ಧದಷ್ಟು ಜನರು ಭರ್ತಿ ಮಾಡಿದ ಅರ್ಜಿಗಳನ್ನು ವಾಪಸ್ ನೀಡದೆ ನಿರ್ಲಕ್ಷೃ ಮಾಡುತ್ತಿದ್ದಾರೆ. ಇದರಿಂದಾಗಿ ಡಿಜಿಟಲೀಕರಣ ಮಾಡುವುದು ಬಾಕಿ ಉಳಿದುಕೊಂಡಿದೆ ಎಂದರು.
ಈಗಾಗಲೇ ದಕ್ಷಿಣ ಮತ್ತು ಉತ್ತರ ಕ್ಷೇತ್ರಗಳಲ್ಲಿನ ಜನರಿಗೆ ಭರ್ತಿ ಮಾಡಿ ಅರ್ಜಿಗಳನ್ನು ಸಲ್ಲಿಸುವಂತೆ ಮನೆ ಮನೆಗೆ ತೆರಳಿ ವಿನಂತಿಸಲಾಗುತ್ತಿದೆ. ಅಲ್ಲದೆ,ಆಯಾ ರಾಜಕೀಯ ಪಕ್ಷದ ಕಾರ್ಯಕರ್ತರ ಮೂಲಕ ತಿಳಿಸುವ ಕೆಲಸ ಮಾಡಲಾಗುತ್ತಿದೆ. ಆದರೆ, ನಾಳೆ ಕೊಡುತ್ತೇವೆ ಎಂದು ಒಂದು ವಾರದಿಂದ ಅಲೆದಾಡಿಸುತ್ತಿದ್ದಾರೆ. ಈಹಿನ್ನೆಲೆ ಅರ್ಜಿ ನೀಡದಿರುವವರ ಹೆಸರು ತೆಗೆದು ಹಾಕುವ ಎಚ್ಚರಿಕೆ ನೀಡಲಾಗಿದೆ ಎಂದರು.
ಪಾಲಿಕೆ ಕಂದಾಯ ವಿಭಾಗದ ಆಯುಕ್ತ ಡಾ. ಸಿದ್ದು ಹುಲ್ಲೋಳ್ಳಿ ಮಾತನಾಡಿ, ನಗರದ ಎರಡು ಕ್ಷೇತ್ರಗಳಲ್ಲಿನ ಜನರು ಸಮರ್ಪವಾಗಿ ಮತ ಚೀಟಿಗಳನ್ನು ಸಂಗ್ರಹಿಸಿ ಇಟ್ಟುಕೊಂಡಿಲ್ಲ. ಆಧಾರ ಕಾರ್ಡ್ನಲ್ಲಿರುವ ವಿಳಾಸಕ್ಕೂ ಮತದಾರರ ಚೀಟಿಯಲ್ಲಿರುವ ವಿಳಾಸ ಬೇರೆ ಬೇರೆಯಾಗಿದೆ. ಮತಗಟ್ಟೆ ಪ್ರಕಾರ ಅರ್ಜಿಗಳನ್ನು ಮನೆ ಮನೆಗೆ ತೆರಳಿ ಮುಟ್ಟಿಸಲಾಗಿದೆ. ಆದರೆ, ದಾಖಲಾತಿ ಸಮಸ್ಯೆ ಇತರೆ ಕಾರಣಗಳಿಂದ ಅರ್ಜಿಗಳನ್ನು ವಾಪಸ್ ನೀಡಲು ಮೀನಾಮೇಸ ಮಾಡುತ್ತಿದ್ದಾರೆ. ಇದರಿಂದಾಗಿ ಎಸ್ಐಆರ್ ಮುಂದಿನ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ತಿಳಿಸಿದರು.
ಪಾಲಿಕೆ ಅಭಿವೃದ್ಧಿ ವಿಭಾಗದ ಆಯುಕ್ತೆ ಲಕ್ಷ್ಮೀ ನಿಪ್ಪಾಣಿಕರ್. ಬಿಎಲ್ಒ ಸತೀಶ ಡವಳೆ ಇತರರಿದ್ದರು.
Laxmi News 24×7