ರಾಂಚಿ, ಜ.19- ಪ್ರಧಾನಿ ನರೇಂದ್ರ ಮೋದಿ ಕಳ್ಳ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಮತ್ತೊಂದು ಕಾನೂನು ಕಂಟಕ ಎದುರಾಗಿದೆ.
ಜಾರ್ಖಂಡ್ನ ರಾಂಚಿ ಸಿವಿಲ್ ನ್ಯಾಯಾಲಯವೊಂದು ಕಾಂಗ್ರೆಸ್ ಮಾಜಿ ಅಧ್ಯಕ್ಷರಿಗೆ ಈ ಸಂಬಂಧ ಸಮನ್ಸ್ ನೀಡಿದೆ. ಫೆ.22ಕ್ಕೂ ಮುಂಚಿತವಾಗಿ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಜ.18ರಂದು ವಿಚಾರಣೆಗೆ ಹಾಜರಾಗುವಂತೆ ಈ ಹಿಂದೆ ಕೋರ್ಟ್ ಆದೇಶಿಸಿತ್ತು. ಕಳೆದ ವರ್ಷ ಮಾ.23ರಂದು ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ರಾಹುಲ್ ಗಾಂಧಿ ಈ ರೀತಿಯ ಹೇಳಿಕೆ ನೀಡಿದ್ದರು. ಮಹಾ ವಂಚಕರಾದ ನೀರವ್ ಮೋದಿ , ಲಲಿತ್ ಮೋದಿ, ನರೇಂದ್ರ ಮೋದಿ ಇವೆರೆಲ್ಲರ ಸರ್ ನೇಮ್ ಒಂದೇ ಆಗಿದೆ. ಈ ಎಲ್ಲಾ ಕಳ್ಳರ ಸರ್ ನೇಮ್ ಸಾಮಾನ್ಯವಾಗಿ ಮೋದಿಯಾಗಿ ಹೇಗೆ ಬಂದಿತು? ಇಂತಹ ಮೋದಿಗಳು ಎಷ್ಟು ಜನ ಇದ್ದಾರೆ ಎಂಬುದು ಗೊತ್ತಿಲ್ಲ ಎಂದು ರಾಹುಲ್ ಹೇಳಿದ್ದರು.
ಈ ಹೇಳಿಕೆ ವಿರುದ್ಧ ಮಧ್ಯಪ್ರದೇಶದ ಭೂಪಾಲ್ನಲ್ಲಿನ ಸಿವಿಲ್ ನ್ಯಾಯಾಲಯದಲ್ಲಿ ಕೂಡ ಪ್ರದೀಪ್ ಮೋದಿ ಎಂಬವವರು ದೂರು ದಾಖಲಿಸಿದ್ದರು. ಸಂಬಂಧಿತ ವ್ಯಕ್ತಿಗೆ ಅಂತಹ ಹೇಳಿಕೆ ನೀಡಬೇಕು. ಅದರ ಬದಲು ಸಮುದಾಯದ ಬಗ್ಗೆ ಮಾತನಾಡುವುದು ಆಕ್ಷೇಪಾರ್ಹವಾಗಿರುವುದರಿಂದ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿರುವುದಾಗಿ ದೂರುದಾರರು ತಿಳಿಸಿದ್ದಾರೆ.