ಬೆಂಗಳೂರು: ಮೈಸೂರಿನ ದಸರಾದಲ್ಲಿ ಕಂಬಳ ನಡೆದೇ ನಡೆಯುತ್ತೆ. ಮೈಸೂರಿಗೆ ಈಗಾಗಲೇ 182 ಕೋಣಗಳು ರಿಜಿಸ್ಟರ್ ಆಗಿದೆ ಎಂದು ಶಾಸಕ ಅಶೋಕ್ ರೈ ಹೇಳಿದ್ದಾರೆ.
ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದಿನಿಂದ ಕೋಣಗಳನ್ನ ಓಡಿಸುವವರು ಯಾರಿದ್ದರೋ ಅವರನ್ನ ಸಮಿತಿಗೆ ಸೇರಿಸಲಾಗಿದೆ. ಅವರ ಅಭಿಪ್ರಾಯ ಪಡೆದು ದಸರಾದಲ್ಲಿ ಭಾಗಿಯಾಗುವ ಬಗ್ಗೆ ಒಪ್ಪಿಗೆ ಸೂಚಿಸಿದ್ದೇವೆ. ಬೆಂಗಳೂರಿನಲ್ಲೂ ಕಂಬಳಕ್ಕೆ ವಿರೋಧ ಇತ್ತು. ಆಮೇಲೆ ಕಂಟ್ರೋಲ್ ಮಾಡಲಾಗದಷ್ಟು ಕೋಣಗಳು ಬಂದವು. ಬೆಂಗಳೂರಿನಲ್ಲಿ 175 ಕೋಣಗಳಿದ್ದವು. ಮೈಸೂರಿಗೆ ಈಗಾಗಲೇ 182 ಕೋಣಗಳು ರಿಜಿಸ್ಟರ್ ಆಗಿದೆ. ಈ ಪೈಕಿ 175 ಕೋಣಗಳನ್ನು ಆಯ್ಕೆ ಮಾಡುತ್ತೇವೆ ಎಂದರು.
ಶಾಸಕ ಸುನಿಲ್ ಕುಮಾರ್ ಅಲ್ಲಿಗ್ಯಾಕೆ 8 ಕೋಟಿ ಕೇಳಿದ್ದಾರೆ? ಬಿಜೆಪಿ ಅಧಿಕಾರದಲ್ಲಿದ್ದಾಗ ಕಂಬಳಕ್ಕೆ ಎಷ್ಟು ದುಡ್ಡು ಕೊಟ್ಟಿದ್ದರು? 23 ಕಂಬಳಕ್ಕೆ ಈಗಾಗಲೇ ಕಾಂಗ್ರೆಸ್ ಸರ್ಕಾರ 1.15 ಕೋಟಿ ಹಣ ನೀಡಿದೆ. ಕಂಬಳವನ್ನ ಮುಖ್ಯವಾಹಿನಿಗೆ ತರೋದು ನಮ್ಮ ಉದ್ದೇಶ. ಕಂಬಳಕ್ಕೆ ಪ್ರಾತಿನಿಧ್ಯ ಸಿಗಬೇಕು. ಆಗ ಹೆಚ್ಚಿನ ಅನುದಾನ ಸಿಗುತ್ತದೆ. ಬಿಜೆಪಿ ಸರ್ಕಾರ 5 ವರ್ಷದಲ್ಲಿ 2 ವರ್ಷ ಮಾತ್ರ ಹಣ ಕೊಟ್ಟಿದೆ ಎಂದು ಕಿಡಿಕಾರಿದರು.
ಮೈಸೂರಿನ ದಸಾರದಲ್ಲಿ ಕೋಣ ಮೆರೆಸುವುದಕ್ಕೆ ವಿರೋಧ ಕುರಿತು ಪ್ರತಿಕ್ರಿಯಿಸಿ, ಈ ಹಿಂದೆ ಕೂಡ ರಾಜಮಾತೆ ಬೆಂಗಳೂರಿನ ಕಂಬಳದಲ್ಲೂ ಕುದುರೆ ನಂಟಿದೆ, ಕೋಣನ ನಂಟಿಲ್ಲ ಅಂದಿದ್ದರು. ಮೈಸೂರಿನ ಅರಮನೆಗೂ ಕೋಣಗಳ ನಂಟಿದೆ. ಈ ಎಲ್ಲಾವನ್ನ ವಿಚಾರ ಮಾಡಿ ಬಳಿಕ ರಾಜಮಾತೆಯೆ ಕರೆದು ಬೆಂಗಳೂರಿನ ಕಂಬಳಕ್ಕೆ ಒಪ್ಪಿಗೆ ಸೂಚಿಸಿದ್ದರು. ಹಿಂದಿನ ಇತಿಹಾಸದಲ್ಲಿ ಕೋಣಗಳಿಗೂ, ಅರಮನೆಗೂ ನಂಟಿದೆ. ಇದರಲ್ಲಿ ರಾಜಕೀಯ ಮಾಡಬಾರದು. ಮೈಸೂರಿನಲ್ಲಿ ಕಂಬಳ ಆಗುತ್ತದೆ. ಸಿಎಂ ಸೂಚನೆ ಕೊಟ್ಟ ಬಳಿಕ ಕೆಲಸ ಶುರು ಮಾಡುತ್ತೇವೆ. ಮೈಸೂರಿನಲ್ಲೂ 25 ರಿಂದ 30 ಲಕ್ಷಜನ ಸೇರುತ್ತಾರೆ ಎಂದು ಹೇಳಿದರು.
Laxmi News 24×7