ಬೆಂಗಳೂರು: ಯುವ ಕಾಂಗ್ರೆಸ್ ಬೆಂಗಳೂರು ಉತ್ತರದ ಜಿಲ್ಲಾ ಉಪಾಧ್ಯಕ್ಷೆ ಆಫ್ರೀನ್ ಖಾನ್ ಅವರನ್ನು ಉಚ್ಚಾಟನೆ ಮಾಡಲಾಗಿದೆ.
ದಾವಣಗೆರೆ ಉಪ ಚುನಾವಣೆಗೆ ಸಂಬಂಧಿಸಿದಂತೆ ಬೆಂಗಳೂರಿನ ಶಿವಾಜಿನಗರದ ಶಾಸಕ ರಿಜ್ವಾನ್ ಅರ್ಷದ್ ವಿರುದ್ಧ ಆಫ್ರೀನ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಪ್ರಕಟಿಸಿದ್ದರು. ಇಂದು ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ ಅವರು ಅಫ್ರೀನ್ ಖಾನ್ ಅವರನ್ನು ಉಚ್ಚಾಟನೆ ಮಾಡಿ ಆದೇಶ ಪ್ರಕಟಿಸಿದ್ದಾರೆ.
ಉಚ್ಚಾಟನೆ ಆದೇಶಕ್ಕೆ ಪ್ರತಿಕ್ರಿಯಿಸಿದ ಆಫ್ರೀನ್ ಖಾನ್, ನಾನು ಏಪ್ರಿಲ್ 4 ರಂದೇ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದೇನೆ. ಆದರೆ ಇಂದು ನನ್ನನ್ನು ಹೊರಹಾಕಲಾಗಿದೆ ಇದೆಂತ ಮೂರ್ಖತನದ ನಿರ್ಧಾರ ಎಂದು ಹೇಳಿದ್ದಾರೆ.
ಉಚ್ಚಾಟನೆ ಮಾಡಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದ ಆಫ್ರೀನ್ ಖಾನ್, ಮುಸ್ಲಿಮ್ ನಾಯಕರನ್ನು ಯಾಕೆ ಟಾರ್ಗೆಟ್ ಮಾಡಲಾಗುತ್ತಿದೆ ಎನ್ನುವುದು ಗೊತ್ತಿಲ್ಲ. ಇದಕ್ಕೆಲ್ಲ 2028 ರ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಸಿಟ್ಟು ಹೊರಹಾಕಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣದಲ್ಲಿ ಆಫ್ರೀನ್ ಖಾನ್ ಅವರು ಕಾಂಗ್ರೆಸ್ ವಿರುದ್ಧ ಸರಣಿ ಪೋಸ್ಟ್ ಹಾಕಿ ಕಿಡಿಕಾರುತ್ತಿದ್ದಾರೆ. ಅಂದು ಅಜೀಜ್ ಸೇಠ್ ಪ್ರಭಾವ ಕಡಿಮೆ ಮಾಡಲು ಜಾಫರ್ ಶರೀಫ್ ಅವರನ್ನು ತಂದರು. ಜಾಫರ್ ಶರೀಫ್ ಪ್ರಭಾವ ಕಡಿಮೆ ಮಾಡಲು ರೋಷನ್ ಬೇಗ್ ಅವರನ್ನು ತಂದರು. ನಂತರ ರೋಷನ್ ಬೇಗ್ ಪ್ರಭಾವ ಕುಗ್ಗಿಸಲು ಜಮೀರ್ ಅಹ್ಮದ್ ಖಾನ್ ಅವರನ್ನು ತಂದರು. ಈಗ ಜಮೀರ್ ಪ್ರಭಾವ ಕುಗ್ಗಿಸಲು ರಿಜ್ವಾನ್ ಅರ್ಷದ್, ಮತ್ತು ಸಲೀಂ ಅಹ್ಮದ್ ಅವರನ್ನು ಮುಂದೆ ತರುತ್ತಿದ್ದಾರೆ. ಇಷ್ಟು ವರ್ಷ ಕಾಂಗ್ರೆಸ್ ಹೈಕಮಾಂಡ್ ಇದನ್ನೇ ಮಾಡಿಕೊಂಡು ಮುಸ್ಲಿಮರನ್ನು ಕೇವಲ ವೋಟ್ ಬ್ಯಾಂಕ್ ಆಗಿ ಇಟ್ಟುಕೊಂಡಿದೆ. ಆದರೆ ಯಾರೂ ಜಮೀರ್ ಅಹ್ಮದ್ ಖಾನ್ ರವರನ್ನು ಮುಗಿಸಲು ಸಾಧ್ಯವಿಲ್ಲ ಎಂದು ಪೋಸ್ಟ್ ಹಾಕಿದ್ದಾರೆ.
Laxmi News 24×7