ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಠಾಣೆಯ ಪೇದೆಗೆ ಕೊರೊನಾ ಸೋಂಕು ಬಂದಿದೆ.
ಮೇ 14ರಂದು ಮಹಾರಾಷ್ಟ್ರದ ರಾಯಗಡದಿಂದ ಬಂದಿದ್ದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಕ್ವಾರಂಟೈನ್ ಬಗ್ಗೆ ಸರಿಯಾದ ಮಾಹಿತಿ ನೀಡದ ಕಾರಣ ಸೋಂಕಿತ ಠಾಣೆಗೆ ಹೋಗಿದ್ದ. ಆತನ ದ್ವಿತೀಯ ಸಂಪರ್ಕಕ್ಕೆ ಬಂದ ಹಿನ್ನೆಲೆಯಲ್ಲಿ ಇಂದು 42 ವರ್ಷದ ಹೆಡ್ ಕಾನ್ಸ್ಟೇಬಲ್ ಅವರಿಗೆ ಪಾಸಿಟಿವ್ ಬಂದಿದೆ.
ಮಹಾರಾಷ್ಟ್ರದಿಂದ ಬಂದಿದ್ದ ವ್ಯಕ್ತಿ ಕ್ವಾರಂಟೈನ್ ನಲ್ಲಿದ್ದು ಮೇ 18 ರಂದು ಪಾಸಿಟಿವ್ ಬಂದಿತ್ತು. ಕ್ವಾರಂಟೈನ್ ಆಗುವುದಕ್ಕೆ ಮೊದಲು ಠಾಣೆಗೆ ಹೋಗಿದ್ದರಿಂದ ಸೋಂಕು ಬಂದಿದೆ. ಮುಂಬೈ ವ್ಯಕ್ತಿಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಆತನ ಸಂಪರ್ಕಕ್ಕೆ ಬಂದಿದ್ದರಿಂದ ಮೂರು ಮಂದಿ ಪೇದೆಯನ್ನು ಕ್ವಾರಂಟೈನ್ ಮಾಡಲಾಗಿತ್ತು. ಈ ಪೈಕಿ ಓರ್ವ ಪೇದೆಗೆ ಸೋಂಕು ಇರುವುದು ದೃಢಪಟ್ಟಿದೆ.
ಕೊರೊನಾ ಬಂದಿದ್ದು ಹೇಗೆ?
ಸೋಂಕಿತ ಪೇದೆ ಮುಂಬೈ ವ್ಯಕ್ತಿಯ ಜೊತೆ ನೇರ ಸಂಪರ್ಕ ಹೊಂದಿರಲಿಲ್ಲ. ಮೇ 14 ರಂದು ಮುಂಬೈ ವ್ಯಕ್ತಿ ಠಾಣೆಗೆ ಬಂದಾಗ ಪೇದೆಯೊಬ್ಬರು ಆಧಾರ್ ಕಾರ್ಡ್ ಮತ್ತು ಮೊಬೈಲ್ ಪಡೆದುಕೊಂಡಿದ್ದಾರೆ. ನಂತರ ಈ ಪೇದೆ ಮೊಬೈಲ್ ಹೆಡ್ ಕಾನ್ಸ್ಟೇಬಲ್ ಅವರಿಗೆ ನೀಡಿದ್ದಾರೆ. ಆ ಮೊಬೈಲನ್ನು ಹೆಡ್ ಕಾನ್ ಸ್ಟೇಬಲ್ ಬಳಸಿದ್ದಾರೆ. ಅಚ್ಚರಿಯ ಸಂಗತಿ ಏನೆಂದರೆ ಸೋಂಕಿತನಿಂದ ನೇರವಾಗಿ ಮೊಬೈಲ್ ಮತ್ತು ಆಧಾರ್ ಕಾರ್ಡ್ ಪಡೆದಿದ್ದ ಪೇದೆಯ ಫಲಿತಾಂಶ ನೆಗೆಟಿವ್ ಬಂದಿದೆ.
ಪೇದೆಗೆ ಸೋಂಕು ಬಂದ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನೇತೃತ್ವದಲ್ಲಿ ವಿಟ್ಲ ಪೊಲೀಸ್ ಠಾಣೆಗೆ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗಿದೆ.
ಇಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಮಧ್ಯಾಹ್ನದ ಬುಲೆಟಿನ್ ನಲ್ಲಿ ಒಂದು ಪ್ರಕರಣ ಬಂದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 58ಕ್ಕೆ ಏರಿಕೆಯಾಗಿದೆ. ಒಟ್ಟು 15 ಮಂದಿ ಬಿಡುಗಡೆಯಾಗಿದ್ದು, 37 ಸಕ್ರಿಯ ಪ್ರಕರಣಗಳಿವೆ. 6 ಮಂದಿ ಮೃತಪಟ್ಟಿದ್ದಾರೆ.