ಬೆಂಗಳೂರು,ಮಾ.11- ಹಿರಿಯ ಶಾಸಕರ ರಮೇಶ್ಕುಮಾರ್ ಹಾಗೂ ಸಚಿವ ಸುಧಾಕರ್ ನಡುವಿನ ಜಟಾಪಟಿ ಹಿನ್ನೆಲೆಯಲ್ಲಿ ನಡೆಯುತ್ತಿರುವ ಗದ್ದಲ ವಿಧಾನಸಭೆಯಲ್ಲಿ ಮುಂದುವರೆದಿದ್ದು, ಕೋಲಾಹಲದ ವಾತಾವರಣ ನಿರ್ಮಿಸಿತು. ಒಂದು ಹಂತದಲ್ಲಿ ವಿರೋಧ ಪಕ್ಷದವರು ಸಮಾಧಾನಗೊಂಡು ಕಲಾಪಕ್ಕೆ ಸಹಕರಿಸಲು ಮುಂದಾದರೂ ಆಡಳಿತ ಪಕ್ಷದ ಶಾಸಕರು ರೊಚ್ಚಿಗೆದ್ದಿದ್ದರಿಂದ 15 ನಿಮಿಷ ಸದನ ಮುಂದೂಡಬೇಕಾದ ಅನಿವಾರ್ಯತೆ ಎದುರಾಯಿತು.
ಇಂದು ವಿಧಾನಸಭೆಯ ಕಲಾಪ ಆರಂಭಗೊಳ್ಳುತ್ತಿದ್ದಂತೆ ವಿಪಕ್ಷದ ನಾಯಕ ಸಿದ್ದರಾಮಯ್ಯ, ಸಚಿವ ಕೆ.ಎಸ್.ಈಶ್ವರಪ್ಪ ಇಬ್ಬರೂ ಏಕಕಾಲಕ್ಕೆ ಎದ್ದು ನಿಂತು ನಿನ್ನೆಯ ಘಟನೆಯ ಹಿನ್ನೆಲೆಯಲ್ಲಿ ಗಲಾಟೆ ಆರಂಭಿಸಿದರು. ಆಡಳಿತ ಪಕ್ಷದ ಶಾಸಕರ ಬಗ್ಗೆ ಪ್ರತಿಪಕ್ಷದ ಶಾಸಕರು ರಮೇಶ್ಕುಮಾರ್ ಅವರು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಕೂಡಲೇ ಅವರನ್ನು ಸದನದಿಂದ ಹೊರಹಾಕಿ ಎಂದರು.
ಸಿದ್ದರಾಮಯ್ಯ ಅವರು ರಮೇಶ್ಕುಮಾರ್ ವಿರುದ್ದ ಸಚಿವ ಸುಧಾಕರ್ ನೀಡಿರುವ ಹೇಳಿಕೆಯಲ್ಲಿ ಹಕ್ಕುಚ್ಯುತಿಯಾಗಿದ್ದು, ನಾನು ನಿನ್ನೆಯೂ ನಿಮ್ಮ ಬಳಿ ಈ ವಿಷಯ ಪ್ರಸ್ತಾಪಿಸಿದ್ದೇನೆ. ಇಂದು ಆ ಕುರಿತಂತೆ ಸೂಚನಾ ಪತ್ರ ಕಳುಹಿಸಿದ್ದೇನೆ. ಹಕ್ಕುಚ್ಯುತಿ ಮಂಡಿಸಲು ಅವಕಾಶ ನೀಡಿ ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಎರಡೂ ಕಡೆಗಳ ಶಾಸಕರು ಎದ್ದು ನಿಂತು ಕೂಗಾಡಿದ್ದರಿಂದ ಯಾರು ಏನು ಹೇಳುತ್ತಿದ್ದಾರೆ ಎಂಬುದು ಅರ್ಥವಾಗದ ಸನ್ನಿವೇಶ ಸೃಷ್ಟಿಯಾಯಿತು.
ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹಕ್ಕುಚ್ಯುತಿ ಕುರಿತಂತೆ ಎರಡೂ ಕಡೆಯಿಂದಲೂ ಸೂಚನಾ ಪತ್ರ ಬಂದಿದೆ. ಸಿದ್ದರಾಮಯ್ಯನವರೂ ಹಕ್ಕುಚ್ಯುತಿ ಪ್ರಸ್ತಾಪಿಸಿದ್ದಾರೆ. ಸುಧಾಕರ್ ಕೂಡ ತಮಗೆ ಹಕ್ಕುಚ್ಯುತಿಯಾಗಿದೆ ಎಂದು ಸೂಚನಾಪತ್ರ ಕಳುಹಿಸಿದ್ದಾರೆ. ನಿಯಮಾವಳಿ ಪ್ರಕಾರ ನಾನು ಹಕ್ಕುಚ್ಯುತಿಗೆ ಅವಕಾಶಕೊಡಬೇಕು, ಕೊಡುತ್ತೇನೆ. ಅದೇ ರೀತಿ ನಿಯಮಾವಳಿ ಪ್ರಕಾರ ಮೊದಲು ಪ್ರಶ್ನೋತ್ತರ ನಡೆಯಲಿ. ಆನಂತರ ಹಕ್ಕುಚ್ಯುತಿ ಚರ್ಚೆಗೆ ಅವಕಾಶಕೊಡುತ್ತೇನೆ ಎಂದು ಸಮಾಧಾನಪಡಿಸಿದರು.