ಬೆಂಗಳೂರು, ಮಾ.11- ಇಂದಿನ ಪರಿಸ್ಥಿತಿಯಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧೀಜಿ, ಬಾಬಾ ಸಾಹೇಬ್ ಅಂಬೇಡ್ಕರ್ ಅಂತಹವರೇ ಚುನಾವಣೆಗೆ ನಿಂತರೂ ಗೆಲ್ಲಲಾಗದ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು ವ್ಯವಸ್ಥೆಯನ್ನು ಬೆತ್ತಲು ಮಾಡಿವೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಸಿ.ಟಿ.ರವಿ ಪರಿಷತ್ನಲ್ಲಿ ಹೇಳಿದರು.
ಸಂವಿಧಾನದ ಚರ್ಚೆ ಕುರಿತಂತೆ ಜೆಡಿಎಸ್ನ ಶ್ರೀಕಂಠೇಗೌಡ ಅವರು ಮಾತನಾಡುತ್ತಿದ್ದ ವೇಳೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ನಡೆದ ಉಪಚುನಾವಣೆಯಲ್ಲಿ ಹಣ, ಹೆಂಡ, ಒಂದೊಂದು ಮತಕ್ಕೆ 500, ಸಾವಿರ ಹಂಚಿಕೆ ಮಾಡಲಾಯಿತು ಎಂದು ಆರೋಪಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಸಿ.ಟಿ.ರವಿ ಅವರು, ನಾವೆಲ್ಲರೂ ಇಂದು ವ್ಯವಸ್ಥೆಯನ್ನೇ ಬೆತ್ತಲು ಮಾಡಿದ್ದೇವೆ. ಮಹಾತ್ಮಗಾಂಧೀಜಿ, ಅಂಬೇಡ್ಕರ್ ಅಂತಹವರೇ ಚುನಾವಣೆಗೆ ನಿಂತರೆ ಜನರು ಗಾಂಧಿ ನೋಟು ಕೊಡು ಎಂದು ಕೇಳುತ್ತಾರೆ. ಇದಕ್ಕೆ ಎಲ್ಲಾ ಪಕ್ಷಗಳು ಕಾರಣ ಎಂದು ದೂರಿದರು.
ನಾವು ಚಿಕ್ಕವರಿದ್ದಾಗ ಚುನಾವಣೆಯಲ್ಲಿ ಯಾರಾದರೂ ನಿರ್ದಿಷ್ಟ ಪ್ರದೇಶಗಳಲ್ಲಿ ಪಾಕೆಟ್ ಹಂಚಿದರೆ ದೊಡ್ಡ ಸುದ್ದಿ ಯಾಗುತ್ತಿತ್ತು. ಈಗ ಚುನಾವಣೆಯಲ್ಲಿ ಹಣ, ಹೆಂಡ ಇಲ್ಲದದ್ದರೆ ಮತದಾರರು ಕೈ-ಬಾಯಿ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಾಹಯಕತೆ ವ್ಯಕ್ತಪಡಿಸಿದರು. ಈ ವೇಳೆ ಜೆಡಿಎಸ್ನ ರಮೇಶ್ಗೌಡ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಗ್ಗೊಲೆ ಮಾಡಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ. ಇಡೀ ವ್ಯವಸ್ಥೆಯನ್ನೇ ಹಾಳು ಮಾಡಿದ್ದೀರಿ. ಮಂಡ್ಯ ಉಪ ಚುನಾವಣೆಯಲ್ಲಿ ಗೆಲ್ಲಲು ನೀವು ಎಷ್ಟೆಎಷ್ಟು ಹಣ ಹಂಚಿದ್ದೀರಿ ಎಂದು ಪ್ರಶ್ನಿಸಿದರು.
ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್ ಹಣದ ಹೊಳೆಯನ್ನೇ ಹರಿಸುವ ಮೂಲಕ ಬಿಜೆಪಿಯವರು ಇಡೀ ವ್ಯವಸ್ಥೆಯನ್ನು ಕಲುಷಿತಗೊಳಿಸಿದರು. ಈಗ ಯಾರೇ ಚುನಾವಣೆಗೆ ನಿಂತರೂ ಮೊದಲು ಎಷ್ಟು ಕೊಡುತ್ತೀರಿ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣೀಭೂತರು ಯಾರು ಎಂದು ಪ್ರಶ್ನಿಸಿದರು. ಮಾತು ಮುಂದುವರೆಸಿದ ಶ್ರೀಕಂಠೇಗೌಡ ಅವರು, ಈಗಿನ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಪಾತಾಳಕ್ಕಿಳಿಸಿದೆ. ಹಣ, ಹೆಂಡ ಹಂಚದಿದ್ದರೆ ಗೆಲ್ಲಲ್ಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದಲ್ಲಿ ಬಹುಪಕ್ಷೀಯ ಪದ್ಧತಿ ಬದಲು ತ್ರಿಪಕ್ಷ ಪದ್ದತಿ ಜಾರಿ ಮಾಡಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.