ಬೆಂಗಳೂರು, ಏ.22- ಸರ್ಕಾರವೇನೋ ಬಡವರಿಗಾಗಿ ಉಚಿತ ಹಾಲು ನೀಡುತ್ತಿದೆ. ಆದರೆ ಇದನ್ನು ಪಡೆಯಲು ಜನ ಮುಗಿ ಬೀಳುತ್ತಿರುವುದನ್ನು ನೋಡಿದರೆ ಮಹಾ ಮಾರಿ ಕೊರೊನಾ ಉಚಿತವಾಗಿ ಹರಡುತ್ತಿದೆಯೇನೋ ಎಂದೆನಿಸುತ್ತಿದೆ.ಬಿಟ್ಟಿ ಹಾಲು ಪಡೆಯಲು ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಾ ಮುಂದು ತಾ ಮುಂದು ಎಂದು ನುಗ್ಗುತ್ತಿರುವುದು ಒಬ್ಬರ ಮೇಲೊಬ್ಬರು ಬಿದ್ದು ಪೈಪೋಟಿಗೆ ಬೀಳುತ್ತಿರುವುದರಿಂದ ಹಾಲು ಉಚಿತ ಕೊರೊನಾ ಖಚಿತ ಎಂಬಂತಾಗಿದೆ.
ನಗರದ ಯಲಹಂಕ, ಬಾಪೂಜಿ ನಗರ, ನೆಲಮಂಗಲ ಮುಂತಾದೆಡೆ ಉಚಿತ ಹಾಲು ಪಡೆಯಲು ಜನತೆ ಮುಗಿ ಬಿದ್ದರೂ ಲಾಕ್ಡೌನ್ ಇದ್ದರೂ ಅಂತರ ಕಾಯ್ದುಕೊಳ್ಳದೆ ಹಾಲು ಪಡೆಯಲು ಜನ ಜಟಾಪಟಿಯನ್ನೇ ನಡೆಸಿದರು.ಬಾಪೂಜಿನಗರದಲ್ಲಿ ಸೀಲ್ಡ್ಡೌನ್ ಮಾಡಲಾಗಿದೆ.
ಮನೆಯಿಂದ ಯಾರೂ ಹೊರ ಬರದಂತೆ ಕಟ್ಟೆಚ್ಚರ ವಹಿಸಲಾಗಿದೆ. ಆದರೆ ಇಂದು ಬೆಳಗ್ಗೆ ಉಚಿತ ಹಾಲು ಕೊಡಲು ಬಂದಾಗ ಹಾಲು ಪಡೆಯಲು ವಾಗ್ವಾದ ನಡೆಯಿತು. ಹಾಲು ನೀಡುವವರು ಮತ್ತೆ ಪಡೆಯುವವರ ನಡುವೆ ಜಟಾಪಟಿಗೆ ಕಾರಣವಾಯಿತು. ಒಬ್ಬರ ಮೇಲೆ ಒಬ್ಬರು ಬಿದ್ದು ಹಾಲು ಪಡೆಯಲು ಮುಂದಾಗಿ ಲಾಕ್ಡೌನ್ ನಿಯಮಾವಳಿಗಳನ್ನು ಉಲ್ಲಂಘಿಸಿದರು. ಅತ್ತ ಯಲಹಂಕದಲ್ಲಿ ಉಚಿತ ಹಾಲು ನೀಡುವ ವೇಳೆ ಕೈ ಕೈ ಮಿಲಾಯಿಸುವ ಹಂತ ತಲುಪಿತು. ಹಾಲು ಪಾಕೆಟ್ಗಳನ್ನು ಪಡೆಯುವ ಸಂದರ್ಭದಲ್ಲಿ ಮನೆಗಳ ಬಳಿ ಜಗಳವೇ ನಡೆಯಿತು.
ಈ ಜಗಳದಲ್ಲಿ ಹಾಲಿನ ಪಾಕೆಟ್ಗಳು ತುಳಿತಕ್ಕೊಳಗಾಗಿ ಸುಮಾರು ಹಾಲು ಬೀದಿ ಪಾಲಾಯಿತು. ನೆಲಮಂಗಲದಲ್ಲಿ ಉಚಿತ ಹಾಲು ಪಡೆಯಲು ಏಕಾಏಕಿ ಮನೆಯಿಂದ ಜನ ಹೊರ ಬಂದ ಕಾರಣ ಜನಜಂಗುಳಿ ಉಂಟಾಯಿತು. ಹಾಲು ನಮಗೆ ಸಿಕ್ಕಿಲ್ಲ, ಸಿಕ್ಕಲ್ಲ ಎಂದು ನೂಕು ನುಗ್ಗಲು ಉಂಟಾಗಿ ಗೊಂದಲದ ವಾತಾವರಣ ಸೃಷ್ಟಿಯಾಯಿತು.
ಜನರ ಹಿತಾಸಕ್ತಿ ದೃಷ್ಟಿಯಿಂದ ಕೆಎಂಎಫ್ನ ಹೆಚ್ಚುವರಿಯಾದ ಸುಮಾರು 7 ಲಕ್ಷ ಲೀಟರ್ ಹಾಲನ್ನು ಪ್ರತಿ ದಿನ ಬಡವರಿಗೆ ವಿತರಿಸುತ್ತಿದೆ. ಆದರೆ ಈ ಹಾಲನ್ನು ಪಡೆಯಲು ಜನ ಸಂಯಮ ಮೀರುತ್ತಿರುವುದು ಇಷ್ಟೆಲ್ಲಾ ಅವಾಂತರಗಳಿಗೆ ಕಾರಣವಾಗುತ್ತಿದೆ.
ಕೆಲವೆಡೆ ಹಾಲನ್ನು ಶಿಸ್ತುಬದ್ಧವಾಗಿ ಮನೆ ಮನೆಗೆ ತೆರಳಿ ಹಾಲನ್ನು ವಿತರಿಸುತ್ತಾರೆ. ಮತ್ತೆ ಕೆಲವೆಡೆ ಈ ರೀತಿಯ ಅವಾಂತರಗಳಿಗೆ ಕಾರಣವಾಗುತ್ತಿದೆ. ಇನ್ನೂ ಏ.30ರವರೆಗೆ ಉಚಿತವಾಗಿ ಹಾಲು ವಿತರಿಸಲು ಸರ್ಕಾರ ಸೂಚನೆ ನೀಡಿದೆ. ಇನ್ನು ಯಾವ ಮಟ್ಟದ ಗೊಂದಲ ಸೃಷ್ಟಿಯಾಗುತ್ತದೆಯೋ , ಏನೇನು ಫಜೀತಿಯಾಗುತ್ತದೆಯೋ ಎಂದು ಕಾದು ನೋಡಬೇಕು.