ಬೆಂಗಳೂರು – ಬಹು ನಿರೀಕ್ಷಿತ ಮಹದಾಯಿ ಯೋಜನೆಯ ನೀರು ಬಳಕೆ ಸಂಬಂಧ ಮಧ್ಯಂತರ ಆದೇಶದ ಗೆಜೆಟ್ ನೋಟಿಫಿಕೇಶನ್ ಹರಡಿಸುವುದಕ್ಕೆ ಸುಪ್ರಿಂ ಕೋರ್ಟ್ ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದೆ.
ಮಹದಾಯಿ ನೀರು ಯೋಜನಾ ಪ್ರಾಧಿಕಾರ ನೀಡಿದ್ದ ಮಧ್ಯಂತರ ಆದೇಶದಂತೆ ಕರ್ನಾಟಕ 13.12 ಟಿಎಂಸಿ ನೀರು ಬಳಕೆ ಮಾಡಲು ಅವಕಾಶ ಸಿಕ್ಕಿತ್ತು. ಆದರೆ ಇದಕ್ಕೆ ಕೇಂದ್ರ ಸರಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಬೇಕಿತ್ತು.
ಕೇಂದ್ರ ಸರಕಾರ ಗೋವಾದ ಒತ್ತಡದ ಹಿನ್ನೆಲೆಯಲ್ಲಿ ಸುಪ್ರಿಂ ಕೋರ್ಟ್ ನೆಪ ಮುಂದೆ ಮಾಡಿ ಗೆಜೆಟ್ ನೋಟಿಫಿಕೇಶನ್ ಹೊರಡಿಸಿರಲಿಲ್ಲ. ಇದೀಗ ಸುಪ್ರಿಂ ಕೋರ್ಟ್ ಗೆಜೆಟ್ ನೋಟಿಫಿಕೇಶನ್ ಗೆ ಸೂಚನೆ ನೀಡಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಾನಮಂಡಳದ ಅಧಿವೇಶನದಲ್ಲಿ ಈ ಕುರಿತು ಪ್ರಕಟಣೆ ನೀಡಿದ್ದಾರೆ. ಇದು ಕರ್ನಾಟಕದ ಪಾಲಿಗೆ ದೊಡ್ಡ ಗೆಲುವು ಎಂದೂ ಹೇಳಿದ್ದಾರೆ.
ಕೇಂದ್ರ ಸರಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದರೆ ಹುಬ್ಬಳ್ಳಿ -ಧಾರವಾಡ ಕುಡಿಯುವ ನೀರಿಗೆ 5 ಟಿಎಂಸಿ ಮತ್ತು ಹೈಡ್ರೋ ಪ್ರೊಜೆಕ್ಟ್ ಗೆ 8 ಟಿಎಂಸಿ ನೀರು ಬಳಸಲು ಕರ್ನಾಟಕಕ್ಕೆ ಅವಕಾಶವಾಗಲಿದೆ.