ನವದೆಹಲಿ: ಅವರು ಸಿಪಿ ಯೋಗೇಶ್ವರ್ ಅಲ್ಲ… ಸಿಡಿ ಯೋಗೇಶ್ವರ್… ಸಿಡಿ ಇಟ್ಕೊಂಡೇ ಆಟ ಆಡ್ತಿದ್ದಾರೆ. ಇದು ಕರ್ನಾಟಕಕ್ಕೆ ಕಪ್ಪು ಚುಕ್ಕೆ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ನವದೆಹಲಿಯಲ್ಲಿ ಸಚಿವ ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು. ರೇಣುಕಾಚಾರ್ಯ ಸಿಡಿ ಪ್ರಸ್ತಾಪ ಹಿನ್ನೆಲೆಯಲ್ಲಿ ಈ ಮಾತುಗಳನ್ನು ಆಡಿದರು.
ಲಿಂಗಾಯತರು ಕೆಪಿಸಿಸಿ ಅಧ್ಯಕ್ಷರಾಗುತ್ತಾರೆ ಎಂಬ ವಿಚಾರವಾಗಿ ಹೈಕಮಾಂಡ್ ನಿರ್ದೇಶನವನ್ನು ನಾವು ಪಾಲಿಸುತ್ತೇವೆ. ಯಾವುದೇ ಸಮುದಾಯದ ಅಧ್ಯಕ್ಷ ಆದರೂ ನಾವು ಸ್ವಾಗತಿಸುತ್ತೇವೆ. ಡಿಕೆಶಿ ಈಗಾಗಲೇ ನಾನು ಪಕ್ಷದ ಬಾಗಿಲಿಗೆ ಚಪ್ಪಡಿ ಆಗುತ್ತೇನೆ ಎಂದಿದ್ದಾರೆ. ನಾವು ಪಕ್ಷದ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ ಎಂದು ಹೇಳಿದರು.
ಶಾಮನೂರು ಶಿವಶಂಕರಪ್ಪ, ಎಂ.ಬಿ. ಪಾಟೀಲ್ ಅವರು ಯಡಿಯೂರಪ್ಪಗೆ ಬೆಂಬಲ ಸೂಚಿಸುತ್ತಿರುವ ಕುರಿತು ಅದು ಅವರ ವೈಯಕ್ತಿಕ ವಿಚಾರ. ಅದು ಪಕ್ಷದ ಅಭಿಪ್ರಾಯವಲ್ಲ ಎಂದರು.
ಆಕ್ಸಿಜನ್ ಸಾವುಗಳನ್ನು ಮುಚ್ಚಿಡಲು ಸರ್ಕಾರ ಪ್ರಯತ್ನ ಮಾಡ್ತಿದೆ. ದೆಹಲಿಯಲ್ಲೂ ರಸ್ತೆಯಲ್ಲಿ ಜನರು ಸಾವನ್ನಪ್ಪಿದರು. ಆದರೆ, ಸರ್ಕಾರ ಯಾರು ಆಕ್ಸಿಜನ್ ಕೊರತೆಯಿಂದ ಸತ್ತೇ ಇಲ್ಲ ಅಂತಾ ಹೇಳ್ತಿದೆ. ಇದೊಂದು ಬೇಜಬ್ದಾರಿ ಸರ್ಕಾರ. ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ಒಂದು ತನಿಖೆ ನಡೆಯಬೇಕು. ದೇಶದಲ್ಲಿ ಆಗಿರುವ ಸಾವುಗಳ ಬಗ್ಗೆ ತನಿಖೆ ಮಾಡಿ ಪರಿಹಾರ ನೀಡಬೇಕು. ಮಾಹಿತಿ ಮುಚ್ಚಿಟ್ಟು ಅಪಾರಾಧ ಮಾಡುತ್ತಿರುವ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದರು.