ಚಿಕ್ಕೋಡಿ, ಹಾಸನ: ಮಳೆ ಹೆಚ್ಚಾಗಿದ್ದು ಹಾಸನದಲ್ಲಿ ನದಿಭಾಗದಲ್ಲಿರುವ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ ನೀಡಲಾಗಿದೆ. ಚಿಕ್ಕೋಡಿಯಲ್ಲಿ ಮಳೆಯ ಪ್ರಮಾಣದಲ್ಲಿ ಅಲ್ಪ ಇಳಿಕೆಯಾಗಿದೆ. ಇ
ಬೇಲೂರು, ಮೂಡಿಗೆರೆ ಚಿಕ್ಕಮಗಳೂರು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಬೇಲೂರಿನ ಸಮೀಪದಲ್ಲಿರುವ ಯಗಚಿ ಡ್ಯಾಂ ಭರ್ತಿಯಾಗಿದೆ. ನೀರಿನ ಒಳಹರಿವಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನಲೆಯಲ್ಲಿ, ಡ್ಯಾಂನಿಂದ ಯಾವುದೇ ಕ್ಷಣದಲ್ಲಾದರೂ ನೀರು ಬಿಡುಗಡೆ ಸಾಧ್ಯತೆಯಿದ್ದು, ಅಣೆಕಟ್ಟೆ ಕೆಳಭಾಗದ, ಯಗಚಿ ನದಿಪಾತ್ರದ ಜನರು, ರೈತರು ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಯಗಚಿ ಯೋಜನಾ ವಿಭಾಗದ ಕಾರ್ಯಪಾಲಕ ಅಭಿಯಂತರ ಎಸ್.ಡಿ.ತಿಮ್ಮೇಗೌಡ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದಾರೆ.
ಯಗಚಿ ಅಣೆಕಟ್ಟೆಯ 964.60 ಮೀಟರ್ ಗರಿಷ್ಠ ನೀರಿನ ಮಟ್ಟವಾಗಿದ್ದು, ಇಂದು 964.04 ಮೀಟರ್ ನಷ್ಟು ನೀರು ತುಂಬಿದೆ. 3.603 ಟಿಎಂಸಿ ಗರಿಷ್ಠ ನೀರಿನ ಸಂಗ್ರಹ ಸಾಮಥ್ರ್ಯ ಹೊಂದಿರುವ ಯಗಚಿ ಡ್ಯಾಂನಲ್ಲಿ. ಇಂದು ಡ್ಯಾಂನಲ್ಲಿ 3.38 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ.
ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಮಳೆ ಪ್ರಮಾಣದಲ್ಲಿ ಕೊಂಚ ಇಳಿಕೆಯಾದ ಹಿನ್ನೆಲೆಯಲ್ಲಿ ಕೃಷ್ಣಾ ನದಿ ನೀರಿನ ಪ್ರಮಾಣದಲ್ಲಿ ಯಥಾಸ್ಥಿತಿ ಮುಂದುವರೆದಿದೆ. ವೇದಗಂಗಾ, ದೂದಗಂಗಾ, ಹೀರಣ್ಯಕೇಶಿ ನದಿ ನೀರಿನ ಪ್ರಮಾಣದಲ್ಲೂ ಕೊಂಚ ಇಳಿಕೆಯಾಗಿದೆ. ಚಿಕ್ಕೋಡಿ ವ್ಯಾಪ್ತಿಯ 7 ಸೇತುವೆಗಳ ಜಲಾವೃತ ಯಥಾಸ್ಥಿತಿ ಮುಂದುವರೆದಿದೆ. ನದಿ ತೀರಗಳಲ್ಲಿ ಪ್ರವಾಹ ಭೀತಿ ಹಿನ್ನೆಲೆಯಲ್ಲಿ ಇಂದು ಬೆಳಗಾವಿ ಜಿಲ್ಲಾಧಿಕಾರಿ ಕೃಷ್ಣಾ ನದಿ ತೀರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಲ್ಲೋಳ, ಮಾಂಜರಿ, ಕುಡಚಿ ಗ್ರಾಮಗಳ ನದಿ ತೀರಗಳಿಗೆ ಭೇಟಿ ನೀಡಿ ಪ್ರವಾಹ ಭೀತಿಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಪ್ರವಾಹ ಬರುವ ಸಾಧ್ಯತೆ ಹಿನ್ನೆಲೆಯಲ್ಲಿ ನದಿ ತೀರದಲ್ಲಿ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೇ ಅವಶ್ಯ ಬಿದ್ದಲ್ಲಿ ನದಿ ತೀರದ ಜನರನ್ನ ಸ್ಥಳಾಂತರಿಸಿ ಗಂಜಿ ಕೇಂದ್ರಗಳ ಸ್ಥಾಪನೆಗೆ ಕ್ರಮ ಕೈಗೊಳ್ಳುವಂತೆ ಡಿಸಿ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳಿಗೆ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸಾಥ್ ನೀಡಿದರು. ಈ ಸಂದರ್ಭದಲ್ಲಿ ಚಿಕ್ಕೋಡಿ,ರಾಯಬಾಗ ತಾಲೂಕಾಧಿಕಾರಿಗಳು ಹಾಜರಿದ್ದರು.