ಬೆಳಗಾವಿ :ಸಾಧನೆ ಮಾಡಬೇಕು ಎನ್ನುವುದು ಏನು ಇಲ್ಲ,ಒಳ್ಳೆಯದನ್ನು ಮಾಡ್ತಾ ಹೋದರೆ ಅದೇ ಒಂದು ದೊಡ್ಡ ಸಾಧನೆ ಎಂಬ ಮಾತಿನಂತೆ ಬೆಳಗಾವಿಯ ಶಹಾಪೂರ ಪ್ರದೇಶದಲ್ಲಿರುವ ಮೇದಾರ ಗಲ್ಲಿ ನಿವಾಸಿ ನಾಗೇಶ ಕಡೋಲಿ ಹಾಗೂ ಅರ್ಜುನ ಕಡೋಲಿ ಸಹೋದರರು ನಡೆದುಕೊಳ್ಳುತ್ತಿದ್ದಾರೆ.ಕಳೆದ ಹಲವಾರು ವರ್ಷಗಳಿಂದ ತಮ್ಮ ಸಮಾಜದ ಬಗ್ಗೆ ಅಪಾರ ಕಳಕಳಿ ಇಟ್ಟುಕೊಂಡು ಕೈಲಾದಷ್ಟು ಸೇವೆ ಸಲ್ಲಿಸುತ್ತ ಬಂದಿರುವ ಈ ಸಹೋದರರು ಕೋವಿಡ್ ಕಾಲದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ತಮ್ಮ ಮೇದಾರ ಸಮಾಜದ ಬಡ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿ ಸಮಾಜಕ್ಕೆ ಒಂದು ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ.
ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ಲಾಕ್ ಡೌನ್ ಜಾರಿಗೊಳಿಸಿದರೂ ಕುಲ ಕಸುಬನ್ನು ನಂಬಿ ಬದುಕುತ್ತಿರುವ ಮೇದಾರರಿಗೆ ಯಾವುದೇ ನೆರವು ಘೋಷನೆ ಮಾಡದೆ ನಿರ್ಲಕ್ಷ್ಯ ತೋರಿದೆ.ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿರುವ ಬಡವರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರಿಂದ ಸಮಾಜದ ಜನರ ಕಷ್ಟಕ್ಕೆ ಸ್ಪಂದಿಸಲು ನಾಗೇಶ ಹಾಗೂ ಅರ್ಜುನ ಸಹೋದರರು ಮುಂದಾಗಿದ್ದಾರೆ.ಈಗಾಗಲೇ ಎಮ್.ಕೆ.ಹುಬ್ಬಳ್ಳಿ,ಶಹಾಪೂರ,ವಡಗಾವಿ,ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ವಾಸಿಸುವ ಮೇದಾರ ಸಮಾಜದ ಬಡವರಿಗೆ ಆಹಾರ ಧಾನ್ಯಗಳ ಕಿಟ್ ಗಳನ್ನು ವಿತರಿಸಿ ತಮ್ಮ ಸಾಮಾಜಿಕ ಕಾರ್ಯ ಮುಂದುವರೆಸಿದ್ದಾರೆ.
ಯಲ್ಲಮ್ಮದೇವಿ ಜಾತ್ರೆಯಲ್ಲಿ ಭಕ್ತರಿಗೆ ಉಪಯೋಗವಾಗುವ ಪಡಲಗಿ ಹಾಗೂ ಬುಟ್ಟಿಗಳ ಮೇಲೆ ಅವಲಂಬಿತರಾಗಿ ಬದುಕು ಸಾಗಿಸುತ್ತಿದ್ದ ಕಿತ್ತೂರು ತಾಲೂಕಿನಲ್ಲಿ ವಾಸಿಸುವ ಮೇದಾರರು ತಾವು ತಯಾರಿಸುವ ಬುಟ್ಟಿ ವ್ಯಾಪಾರ ಸ್ಥಗಿತಗೊಂಡಿದ್ದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.ಈ ಬಗ್ಗೆ ಮಾಹಿತಿ ಪಡೆದ ನಾಗೇಶ ಹಾಗೂ ಅರ್ಜುನ ಕಡೋಲಿ ಸಹೋದರರು ತಮ್ಮ ಜೀವದ ಹಂಗು ತೋರೆದು ಅವರ ಕಷ್ಟಕ್ಕೆ ಸ್ಪಂದಿಸಲು ಧಾವಿಸಿದ್ದಾರೆ.ಶುಕ್ರವಾರ ರಂದು ಆಹಾರ ಧಾನ್ಯಗಳ ಕಿಟ್ ಗಳನ್ನು ತಯಾರು ಮಾಡಿಕೊಂಡು ಅಲ್ಲಿರುವ ಬಡ ಕುಟುಂಬಗಳಿಗೆ ವಿತರಣೆ ಮಾಡಿ ಅವರ ಕಷ್ಟಕ್ಕೆ ಸ್ಪಂದಿಸಿದ್ದಾರೆ.ಈ ಸಂದರ್ಭದಲ್ಲಿ ಕಿತ್ತೂರು ಮೇದಾರ ಸಮಾಜದ ಮುಖಂಡರು ಸಮಾಜಮುಖಿ ಕೆಲಸ ಮಾಡುತ್ತಿರುವ ನಾಗೇಶ ಹಾಗೂ ಅರ್ಜುನ ಅವರ ಕಾರ್ಯಕ್ಕೆ ಶ್ಲಾಘಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ಒಟ್ಟಿನಲ್ಲಿ ಸಮಾಜದ ಹಿತ ಮತ್ತು ಏಳಿಗೆಯನ್ನೇ ಬಯಸುವ ಈ ಸಹೋದರರು ಯಾವುದೇ ಸ್ವಯಂ ಸಾಧನೆ ಆಗಲಿ ಸ್ವಾರ್ಥ ಭಾವನೆಯಾಗಲಿ ಇಟ್ಟುಕೊಳ್ಳದೆ ಸಮಾಜಕ್ಕೆ ಒಳ್ಳೆಯದೇ ಮಾಡುತ್ತ ಹೋದರೆ ಅದೇ ಒಂದು ದೊಡ್ಡ ಸಾಧನೆ ಎಂದು ಭಾವಿಸಿ ಸಮಾಜಕ್ಕೆ ಕೈಲಾದಷ್ಟು ಅಳಿಲು ಸೇವೆ ಸಲ್ಲಿಸುತ್ತಿರುವುದು ಬೇರೆಯವರಿಗೂ ಮಾದರಿ ಯಾಗಿದ್ದಾರೆ.