ಗಂಗಾವತಿ: ಕೃಷಿ ಇಲಾಖೆಯ ಅನುಮತಿ ಪಡೆಯದೇ 14ಲಕ್ಷ ರೂ.ಮೌಲ್ಯದ ಬೀಜ, ಗೊಬ್ಬರ ಅನಧಿಕೃತ ಸಂಗ್ರಹ ಮಾಡಿದ ಗೋಡೌನ್ ಮೇಲೆ ಕೃಷಿ ಇಲಾಖೆ ಮತ್ತು ಕೃಷಿ ಜಾಗೃತ ದಳದ ಅಧಿಕಾರಿ ದಾಳಿ ನಡೆಸಿದ್ದಾರೆ.
ಸಿಬಿಎಸ್ ವೃತ್ತದ ಸಮೀಪದ ಗೋಡೌನ್ ನಲ್ಲಿ ಶಂಕ್ರಪ್ಪ ಮೇಟಿ ಎಂಬುವವರಿಗೆ ಸೇರಿದ ಮಲ್ಲಿಕಾರ್ಜುನ ಸೀಡ್ಸ್ ಕಂಪನಿ ಹೆಸರಿನಲ್ಲಿದ್ದ ಬೀಜ ಗೊಬ್ಬರ ಅಂಗಡಿಯಲ್ಲಿ ಕೃಷಿ ಇಲಾಖೆಯಿಂದ ಪರವಾನಿಗೆ ಪಡೆಯದೇ ಸುಮಾರು 14 ಲಕ್ಷ ರೂ.ಮೌಲ್ಯದ ಸಜ್ಜಿ ಮೆಕ್ಕೆಜೋಳ ಹಾಗೂ ರಸಗೊಬ್ಬರ ದಾಸ್ತಾನು ಮಾಡಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಕೃಷಿ ಇಲಾಖೆಯ ಸಹಾಯ ನಿರ್ದೇಶಕ ಸಂತೋಷ ಪಟ್ಟದಕಲ್ಲು, ಜಾಗೃತ ದಳದ ಎಡಿಎ ನಿಂಗಪ್ಪ ಸೇರಿ ಇತರೆ ಅಧಿಕಾರಿಗಳ ತಂಡ ದಾಳಿ ನಡೆಸಿ ಸಂಗ್ರಹಿಸಿದ್ದ ಬೀಜ ಗೊಬ್ಬರ ವಶಕ್ಕೆ ಪಡೆದು ಗೋಡೌನ್ ಸೀಜ್ ಮಾಡಲಾಗಿದೆ.
ಅನಧಿಕೃತವಾಗಿ ಬೀಜಗೊಬ್ಬರ ಸಂಗ್ರಹ ಮಾಡಿ ಮಾಡುತ್ತಿದ್ದ ಶಂಕ್ರಪ್ಪ ಮೇಟಿ ಮಾಲೀಕತ್ವದ ಮಲ್ಲಿಕಾರ್ಜುನ ಸೀಡ್ಸ್ ಅಂಗಡಿಯನ್ನು ಸೀಜ್ ಮಾಡಲಾಗಿದೆ. ಸರಕಾರದ ನಿಯಮದಂತೆ ಸಮಗ್ರ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿಗಳ ಆದೇಶದಂತೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಸಂತೋಷ ಪಟ್ಟದಕಲ್ಲು ತಿಳಿಸಿದ್ದಾರೆ