ನವದೆಹಲಿ : ವೈದ್ಯಕೀಯ ಸೇವಾಕರ್ತರ ಮೇಲೆ ನಡೆಯುವ ಹಿಂಸಾಚಾರದ ಬಗ್ಗೆ ದೇಶದಲ್ಲಿ ಒಂದು ಸಮಗ್ರವಾದ, ಏಕರೂಪ ಮತ್ತು ಪರಿಣಾಮಕಾರಿ ಕಾನೂನನ್ನು ಜಾರಿಗೊಳಿಸಬೇಕೆಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್(ಐಎಂಎ) ಆಗ್ರಹಿಸಿದೆ. ಈ ಕುರಿತು ಐಎಂಎ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಪತ್ರ ಬರೆದಿದೆ.
ದೇಶದಲ್ಲಿ ವೈದ್ಯರ ವಿರುದ್ಧ ವರದಿಯಾಗುತ್ತಿರುವ ಹಲ್ಲೆಗಳ ಹಿನ್ನೆಲೆಯಲ್ಲಿ ಐಎಂಎ ಈ ಮನವಿ ಮಾಡಿದೆ. ಇತ್ತೀಚಿನ ಪ್ರಕರಣದಲ್ಲಿ ಅಸ್ಸಾಂನಲ್ಲಿ ಕಿರಿಯ ವೈದ್ಯರೊಬ್ಬರನ್ನು ಮೃತರೋಗಿಯ ಸಂಬಂಧಿಕರ ದೊಡ್ಡ ಗುಂಪು ಮನಬಂದಂತೆ ಥಳಿಸಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದೆ.
‘ವರ್ಷಗಳು ಕಳೆದಂತೆ ಆರೋಗ್ಯಸೇವಾಕರ್ತರ ಮೇಲಿನ ಹಿಂಸಾಚಾರ ಪ್ರಕರಣಗಳು ಹೆಚ್ಚಿವೆ ಮತ್ತು ವ್ಯಾಪಕವಾಗಿವೆ. ಈ ಆತಂಕಕಾರಿ ವಿಷಯವು ವೈದ್ಯರ ಕಾರ್ಯನಿರ್ವಹಣೆಗೆ ಕುತ್ತಾಗಿದೆ’ ಎಂದು ಹೇಳಿರುವ ಐಎಂಎ, ‘ಭಾರತದಲ್ಲಿ ಆರೋಗ್ಯಸೇವೆಗೆ ಸಂಬಂಧಿಸಿದ ಹಿಂಸಾಚಾರದ ವಿರುದ್ಧ ಸಮಗ್ರವಾದ ಕಾನೂನಿನ ಅಗತ್ಯವಿದೆ. ಆದ್ದರಿಂದ ಪರಿಣಾಮಕಾರಿ ಮತ್ತು ಬಲ ಹೊಂದಿದ ಕಾಯ್ದೆಯೊಂದನ್ನು ಅನುಮೋದಿಸಬೇಕೆಂದು ಮನವಿ ಮಾಡುತ್ತೇವೆ’ ಎಂದು ಪತ್ರದಲ್ಲಿ ಹೇಳಿದೆ.