ಬೆಂಗಳೂರು : ಕೊರೊನಾ ಸೋಂಕಿನ ಪ್ರಮಾಣ ರಾಜ್ಯದಲ್ಲಿ ಗಣನೀಯವಾಗಿ ಇಳಿಮುಖವಾಗಿದ್ದರೂ ಲಾಕ್ ಡೌನ್ ಅವಧಿ ವಿಸ್ತರಣೆ ಮಾಡುವ ಸಂಬಂಧ ಇಂದು ಸಂಜೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಇಂದು ಸಂಜೆ ಎರಡು ಪ್ರಮುಖ ಸಭೆಗಳು ನಡೆಯಲಿದ್ದು,ರಾಜ್ಯದಲ್ಲಿ ಪುನಃ ಲಾಕ್ ಡೌನ್ ಮುಂದುವರೆಸುವ ಕುರಿತಾಗಿ ತೀರ್ಮಾನ ಹೊರಬೀಳುವ ಸಂಭವವಿದೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಸಂಜೆ 4.30ಕ್ಕೆ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಮಹತ್ವದ ಸಭೆಯಲ್ಲಿ ಕೋವಿಡ್ ತಜ್ಞರು, ವೈದ್ಯರು ಪಾಲ್ಗೊಳ್ಳಲಿದ್ದಾರೆ.ಇವರಿಂದ ಯಾವಾಗ ಅನ್ಲಾಕ್ ಮಾಡಿದರೆ ಒಳ್ಳೆಯದು ಎಂಬ ಬಗ್ಗೆ ಸಿಎಂ ಮಾಹಿತಿ ಪಡೆಯಲಿದ್ದಾರೆ.
ನಂತರ ಸಂಜೆ 6ಕ್ಕೆ ಸಚಿವರು, ಹಿರಿಯ ಅಧಿಕಾರಿಗಳೊಂದಿಗೆ ಅಧಿಕೃತ ನಿವಾಸ ಕಾವೇರಿಯಲ್ಲಿ ಸಭೆ ನಡೆಸಲಿದ್ದು, ತಜ್ಞರ ಸಭೆಯ ಸಲಹೆಗಳ ಕುರಿತು ಸಿಎಂ ಮರು ಚರ್ಚೆ ಮಾಡಲಿರುವರು. ಸಚಿವರು ಹಾಗೂ ಅಧಿಕಾರಿಗಳ ಅಭಿಪ್ರಾಯ ಆಲಿಸಲಿದ್ದಾರೆ.ತಜ್ಞರ ಸಭೆಯ ಸಲಹೆಗಳ ಬಗ್ಗೆ ಸಚಿವರು, ಅಧಿಕಾರಿಗಳ ಜೊತೆ ಮರು ಚರ್ಚೆ ನಡೆಸಲಿದ್ದು ಎಲ್ಲರ ಅಭಿಪ್ರಾಯ ಆಲಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.