ರಾಯಚೂರು: ಮದುವೆ ಮಾಡಿಕೊಳ್ಳಲೆಂದು ಆತ ಹೆಣ್ಣು ಹುಡುಕುತಿದ್ದ. ಎರಡು ದಿನದ ಹಿಂದೆ ಮಾರಮ್ಮ ದೇವಿಗೆ ಪೂಜೆಯನ್ನೂ ಮಾಡಿಸಿದ್ದ. ಯಾವುದೇ ಅಡ್ಡಿ-ಆತಂಕವಿಲ್ಲದೆ ಮಗನಿಗೆ ಒಳ್ಳೆಯ ಜೀವನ ಸಿಗಲೆಂದು ಆತನ ತಾಯಿಯೂ ದೇವರಲ್ಲಿ ಬೇಡಿಕೊಂಡಿದ್ದರು. ಆದರೆ, ನಿನ್ನೆ ರಾತ್ರಿ ಆ ಯುವಕ ದುರಂತ ಅಂತ್ಯಕಂಡಿದ್ದಾನೆ.
ರಾಯಚೂರು ತಾಲೂಕಿನ ಮರ್ಚಡ್ ಗ್ರಾಮದ ತಾಯಪ್ಪ(26) ಮೃತ ದುರ್ದೈವಿ. ನಿನ್ನೆ ರಾತ್ರಿ ವಿದ್ಯುತ್ ಇಲ್ಲದ ಕಾರಣಕ್ಕೆ ಸೆಖೆಯೆಂದು ಮನೆಯ ಹೊರಗೆ ಮಲಗುವುದಾಗಿ ಹೋಗಿದ್ದ. ದೇವಸ್ಥಾನದ ಬಳಿ ಕೆಲ ಹೊತ್ತು ಕುಳಿತ್ತಿದ್ದ ಎನ್ನಲಾಗಿದೆ. ಆದರೆ ಆ ರಾತ್ರಿಯೇ ಮನೆ ಬಾಗಿಲ ಸಮೀಪದಲ್ಲೇ ಕಿಡಿಗೇಡಿಗಳು ಆತನ ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಸುದ್ದಿ ತಿಳಿಯುತ್ತಿದ್ದ ಸ್ಥಳಕ್ಕೆ ಬಂದ ರಾಯಚೂರು ಗ್ರಾಮೀಣ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಗನನ್ನು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು.