ಬೆಂಗಳೂರು, ಮೇ 21- ಆಯುಷ್ ಪದ್ಧತಿಗಳ ಮೂಲಕ ಕೋವಿಡ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯಲ್ಲಿ ಆಯುಷ್ ಸಚಿವಾಲಯ ಹಲವಾರು ಉಪಕ್ರಮಗಳನ್ನು ಕೈಗೊಂಡಿದ್ದು, ಮನೆಯಲ್ಲಿ ಕ್ವಾರೆಂಟೈನ್ ಆಗಿರುವ ಕೋವಿಡ್- 19 ರೋಗಿಗಳಿಗೆ ಆಯುಷ್ 64 ಔಷಧಿಯನ್ನು ವಿತರಿಸಲು ಮುಂದಾಗಿದೆ.
ಆಯುಷ್ ಸಚಿವಾಲಯವು ಕೌನ್ಸಿಲ್ ಆಫ್ ಸೈಂಟಿಫಿಕ್ & ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ಜೊತೆಗೆ ಆಯುಷ್ 64 ಆಯುರ್ವೇದ ಮಾತ್ರೆಯ ಮೌಲ್ಯಮಾಪನ ಮಾಡಲು ಬಹು-ಕೇಂದ್ರ ಸಂಶೋಧನೆ ನಡೆಸಿತ್ತು. ಈ ಪ್ರಯೋಗದಲ್ಲಿ ಸ್ಟ್ಯಾಂಡರ್ಡ್ ಆರೈಕೆ ಜೊತೆಗೆ ಆಯುಷ್- 64 ಔಷಧ ಬಳಕೆಯಿಂದ ರೋಗ ಶೀಘ್ರ ಗುಣಮುಖವಾಗಲಿದೆ ಎಂದು ತಿಳಿದು ಬಂದಿದೆ. ಫಲಿತಾಂಶದ ಆಧಾರದ ಮೇಲೆ ಆಯುಷ್ ಸಚಿವಾಲಯವು ಈ ಔಷಧಿಯನ್ನುರಾಷ್ಟ್ರವ್ಯಾಪಿ ವಿತರಿಸಲು ಅಭಿಯಾನವನ್ನು ಪ್ರಾರಂಭಿಸಿದೆ.
ಈ ಮಾತ್ರೆಯು ನಾಲ್ಕು ಗಿಡಮೂಲಿಕೆಗಳಾದ ಸ್ವೆರ್ಶಿಯಾ ಚಿರಾತಾ (ಕಿರಾತ ತಿಕ್ತ), ಅಲ್ಸ್ಟೋನಿಯಾ ಸ್ಕೊಲರಿಸ್ (ಸಪ್ತಪರ್ಣ), ಪಿರ್ಕೊರ್ರಿಯಾ ಕುರೋವಾ (ಕಟುಕಿ) ಮತ್ತು ಸೀಸಲ್ಪಿನಿಯಾ ಕ್ರಿಸ್ಟಾ (ಕುಬೇರಾಕ್ಷ ) ಗಳನ್ನು ಒಳಗೊಂಡಿದೆ . ಸಚಿವಾಲಯದ ಆಶ್ರಯದಲ್ಲಿರುವ ವಿವಿಧ ಸಂಸ್ಥೆಗಳ ಹಾಗೂ ಸೇವಾ ಭಾರತಿಯ ನೆಟ್ವರ್ಕ ಬಳಸಿಕೊಂಡು ಆಯುಷ್- 64 ವಿತರಣೆಯನ್ನು ಹಂತಹಂತವಾಗಿ ದೇಶಾದ್ಯಂತದ ಕಾರ್ಯರೂಪಕ್ಕೆ ತರಲಾಗುವುದು ಎಂದು ತಿಳಿಸಲಾಗಿದೆ.
ಕೇಂದ್ರೀಯ ಆಯುರ್ವೇದ ಸಂಶೋಧನಾ ಸಂಸ್ಥೆಯು ಬೆಂಗಳೂರಿನಲ್ಲಿ ಮೆಜೆಸ್ಟಿಕ್, ಉಪ್ಫಾರ ಪೇಟೆ ಪೊಲೀಸ್ ಠಾಣೆ ಬಳಿ ತುಳಸಿ ತೋಟದಲ್ಲಿ ಫೋನ್ ನಂಬರ್ 080-22356889, ನಂಬರ್ 12, ಮನವರ್ತೆ ಕಾವಲ್, ಉತ್ತರ ಹಳ್ಳಿ ಬೆಂಗಳೂರು ದಕ್ಷಿಣ , ಕನಕಪುರ ಮುಖ್ಯ ರಸ್ತೆ, ವ್ಯಾಲಿ ಸ್ಕೂಲ್ ರಸ್ತೆ, ತಲಘಟ್ಟಪುರ ಪೋಸ್ಟ್, ಬೆಂಗಳೂರು, ಫೋನ್ –29535035 ಇಲ್ಲಿ ಪ್ರತಿದಿನ 9.30 ರಿಂದ 4.30 ರವರೆಗೆ (ರಜಾ ದಿನಗಳನ್ನು ಹೊರತುಪಡಿಸಿ) ಉಚಿತವಾಗಿ ನುರಿತ ವೈದ್ಯರ ಮೂಲಕ ಔಷಧಿಯನ್ನು ಒದಗಿಸಲಾಗುತ್ತಿದೆ.
ರೋಗಿಯ ಆಧಾರ್ ಸಂಖ್ಯೆ ಮತ್ತು ಕೋವಿಡ್ ಪಾಸಿಟಿವ್ ಫಲಿತಾಂಶಗಳನ್ನು (7 ದಿನಗಳೊಳಗಾಗಿ) ಹೊಂದಿರುವ ರೋಗಿಯ ಪ್ರತಿನಿಧಿಗೆ ಔಷಧಿಯನ್ನು ನೀಡಲಾಗುತ್ತದೆ. ಕರೋನಾ ಪೀಡಿತರು/ಪರಿವಾರದವರು ಕ್ವಾರೆಂಟೈನ್ ನಿಯಮಗಳನ್ನು ಖಡ್ಡಾಯವಾಗಿ ಪಾಲಿಸಬೇಕು. ಆಯುಷ್ -64 ಮಾತ್ರೆಯನ್ನು, ವೈದ್ಯರು ಕೊಟ್ಟಿರುವ ಅಲೋಪತಿ ಔಷಧಿಗಳ ಜೊತೆಗೆ ಉಪಯೋಗಿಸಬೇಕು. ಕರೋನಾ ಪೀಡಿತರು/ಪರಿವಾರದವರು ಕ್ವಾರೆಂಟೈನ್ ನಿಯಮಗಳನ್ನು ಖಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ.