ನವದೆಹಲಿ: ದೇಶದಲ್ಲಿ ಕೊರೊನಾ ಎರಡನೇ ಅಲೆ ಮಿತಿಮೀರಿ ಹಬ್ಬಲು ಧಾರ್ಮಿಕ ಕಾರ್ಯಕ್ರಮಗಳು ಮತ್ತು ವಲಸೆ ಪ್ರಮುಖ ಕಾರಣ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ನೇತೃತ್ವದ ಅಧ್ಯಯನ ತಂಡವೊಂದು ವರದಿ ಮಾಡಿದೆ.
ಐಸಿಎಂಆರ್ ಅಧ್ಯಯನದ ಪ್ರಕಾರ, ವಿದೇಶಿ ಪ್ರಯಾಣಿಕರು ಭಾರತಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವುದು, ದೇಶದಲ್ಲಿನ ಜನರು ಆಂತರಿಕವಾಗಿ ವಲಸೆ ಹೋಗಿರುವುದು ಮತ್ತು ದೇಶದಾದ್ಯಂತ ನಡೆದ ಹಲವು ಧಾರ್ಮಿಕ ಕಾರ್ಯಕ್ರಮಗಳು ಕೊರೊನಾ ಎರಡನೇ ಅಲೆ ಹೆಚ್ಚಳಕ್ಕೆ ನೇರವಾದ ಕಾರಣ. ಮಿಂಟ್ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಿದಂತೆ ಕೊರೊನಾ ರೂಪಾಂತರಿಗಳಲ್ಲಿ ಕಂಡುಬರುತ್ತಿರುವ ಅಮೀನೋ ಆಸಿಡ್ ರೂಪಾಂತರಗಳು ಈಗ ಪ್ರಸರಣ ಹೊಂದುತ್ತಿರುವ ತಳಿಗಳಲ್ಲಿ ಹೋಸ್ಟ್ ಅಡಾಪ್ಟೇಷನ್ ಗೆ ಸಜ್ಜಾಗಿದ್ದು, ವಿಕಾಸಾತ್ಮಕ ಪ್ರವೃತ್ತಿಯತ್ತ ಮುನ್ನುಗ್ಗುತ್ತಿದೆ ಎಂದು ವರದಿ ತಿಳಿಸಿದೆ.
ಮೂರು ರೂಪಾಂತರಿಗಳಾದ ಬಿ.1.1.7 ವಂಶಾವಳಿ ಆತಂಕಕ್ಕೆ ಕಾರಣವಾಗಿದ್ದು, ಬಿ.1.351 ವಂಶಾವಳಿ ಭಾರತದಲ್ಲಿ ಹೆಚ್ಚು ಕಂಡು ಬಂದಿದ್ದು, ಆಂಟಿಜೆನಿಕ್ ಡ್ರಿಫ್ಟ್, ಹರಡುವಿಕೆ ಮತ್ತು ರೋಗನಿರೋಧಕವನ್ನೂ ಮೀರಿಸುವ ಸಾಮಥ್ರ್ಯವನ್ನು ಈ ವಂಶಾವಳಿ ಹೊಂದಿರುವುದರಿಂದ ಸೋಂಕು ಹೆಚ್ಚಳಗೊಂಡಿದೆ ಎಂದು ಐಸಿಎಂಆರ್ ಹೇಳಿದೆ.
ಇದರೊಂದಿಗೆ ಬಿ.1.617 ವೈರಾಣು ಕೂಡ ಪತ್ತೆಯಾಗಿದ್ದು, ಇದೂ ಹೆಚ್ಚಿನ ಪ್ರಸರಣ ಪ್ರಮಾಣದ ಸಾಮಥ್ರ್ಯ ಹೊಂದಿದೆ. ಜನವರಿಯಿಂದ ಆಗಸ್ಟ್ 2020ರ ವರೆಗೆ ಇ4840 ಎಂಬ ವೈರಾಣು ಮಹಾರಾಷ್ಟ್ರದಲ್ಲಿ ಮೊದಲು 2020 ಜುಲೈನಲ್ಲಿ ಕಂಡು ಬಂದಿದೆ. ಬಳಿಕ ಎನ್440ಕೆ ವೈರಾಣು ತೆಲಂಗಾಣ, ಆಂಧ್ರಪ್ರದೇಶ, ಅಸ್ಸಾಂಗಳಲ್ಲಿ ಮೇ 2020ರ ಬಳಿಕ ಪತ್ತೆಯಾಗಿದೆ ಎಂದು ಅಧ್ಯಯನ ತಂಡ ತಿಳಿಸಿದೆ.