ಬೆಂಗಳೂರು (ಮೇ 19): ಕರ್ನಾಟಕದಲ್ಲಿ ಲಾಕ್ಡೌನ್ ಮುಂದುವರಿಸಿ ಬಡವರಿಗೆ ಆಹಾರ ಹಾಗೂ ದುಡ್ಡು ಕೊಡಬೇಕು. ರಾಜ್ಯದಲ್ಲಿ ಕೊರೋನಾ ಟೆಸ್ಟ್ ಕಡಿಮೆ ಮಾಡಿದಾರೆ, ಪಾಸಿಟಿವ್ ರೇಟ್ ಜಾಸ್ತಿ ಆಗಿದೆ. ರಾಜ್ಯದ ಎರಡು ಜಿಲ್ಲೆಗಳಲ್ಲಿ ಶೇ. 55 ಪಾಸಿಟಿವಿಟಿ ರೇಟ್ ಇದೆ. ಅದು ಕಂಟ್ರೋಲ್ ಗೆ ಬರಬೇಕು ಅಂದರೆ 5%ಗಿಂತ ಕಡಿಮೆ ಇರಬೇಕು. ಕರ್ನಾಟಕದಲ್ಲಿ ಲಾಕ್ಡೌನ್ ಮುಂದುವರೆಸಿ. ಪಾಸಿಟಿವ್ ರೇಟ್ ಶೇ. 5ಕ್ಕಿಂತ ಕಡಿಮೆ ಬರೊ ತನಕ ಲಾಕ್ಡೌನ್ ಮಾಡಿ. ನಾನು ಸರ್ಕಾರಕ್ಕೆ ಹಲವಾರು ಪತ್ರ ಬರೆದಿರುವೆ. ಆದರೆ, ಒಂದು ಪತ್ರಕ್ಕೂ ಸರ್ಕಾರ ಉತ್ತರ ಕೊಟ್ಟಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಸಹಕಾರ ಇಲಾಖೆಯ ಸಂಬಂಧ ಅವರ ಘೋಷಣೆ ಸಾಲದ ಕಂತು ಮುಂದೆ ಹಾಕೋದು ಮಾತ್ರ. ಅದರಿಂದ ಸರ್ಕಾರದ ಮೇಲೆ ಹೊರೆ ಆಗುವುದಿಲ್ಲ. ಕಟ್ಟಡ ಕಾರ್ಮಿಕರಿಗೆ ಕೊಡೋದು ಅವರ ಕಲ್ಯಾಣ ನಿಧಿಯ ಹಣ, ಸರ್ಕಾರದ ಖಜಾನೆಯಿಂದ ಒಂದು ರೂಪಾಯಿಯೂ ಹೋಗುವುದಿಲ್ಲ. ಕಾರ್ಮಿಕರೇ ಕೊಟ್ಟಿರೋ ವಂತಿಗೆ ಹಣ ಅದು, 434 ಕೋಟಿ ಹೊರೆ ಬಜೆಟ್ ಮೇಲೆ ಬರಲ್ಲ. ಅಲ್ಲಿಗೆ 628 ಕೋಟಿ 38 ಲಕ್ಷ ರೂಪಾಯಿ ಮಾತ್ರ ಬಜೆಟ್ ಮೇಲೆ ಹೊರೆ ಬರೋದು. ಆದರೆ 1,250 ಕೋಟಿ ಅಂತಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಕಳೆದ ಬಾರಿ 2,100 ಕೋಟಿ ರೂ. ಪ್ಯಾಕೇಜ್ ಅಂತ ಘೋಷಣೆ ಮಾಡಿದ್ದರು. ಅದರಲ್ಲಿ 850 ಕೋಟಿ ರೂ. ಕಟ್ಟಡ ಕಾರ್ಮಿಕರಿಗೆ ಅವರ ಕಲ್ಯಾಣ ನಿಧಿಯಿಂದ ಕೊಟ್ಟಿದ್ದರು. ಈ ಬಾರಿ ಕಡಿಮೆ ಮಾಡಿದ್ದಾರೆ. ಕಳೆದ ಬಾರಿ 7 ಲಕ್ಷ ಜನ ಡ್ರೈವರ್ ಗಳಿಗೆ ಪರಿಹಾರ ಕೊಡುತ್ತೇವೆ ಎಂದು ಹೇಳಿ ಎಲ್ಲರಿಗೂ ಕೊಡಲಿಲ್ಲ. ಕಲಾವಿದರು ಹಾಗೂ ಕಲಾ ತಂಡಕ್ಕೆ 3 ಸಾವಿರ ರೂಪಾಯಿ ಪರಿಹಾರ ಅಂತ ಸಿಎಂ ಯಡಿಯೂರಪ್ಪ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. 1250 ಕೋಟಿ ರೂ. ಪ್ಯಾಕೇಜ್ ಅಂತ ಹೇಳಿದಾರೆ. ಆದರೆ ವಾಸ್ತವಿಕವಾಗಿ 1,111 ಕೋಟಿ ರೂ ಮಾತ್ರ. ರೈತರಿಗೆ ಘೋಷಣೆ ಮಾಡಿದ ಹಣವನ್ನು ಕಳೆದ ಬಾರಿಯೇ ಕೊಡಲಿಲ್ಲ. ಇದು ಅವೈಜ್ಞಾನಿಕ ಪ್ಯಾಕೇಜ್ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಬಡವರಿಗೆ ಫ್ರೀಯಾಗಿ ಅಕ್ಕಿ ಕೊಡಿ ಅಂತ ನಾನು ಒತ್ತಾಯ ಮಾಡಿದ್ದೆ. ಕಾರ್ಮಿಕರಿಗೆ, ಬಡವರಿಗೆ, ಬೀದಿ ವ್ಯಾಪಾರಿಗಳಿಗೆ, ಬಿಪಿಎಲ್ ಕಾರ್ಡ್ ಹೋಲ್ಡರ್ ಗಳಿಗೆ ನೆರವು ಕೊಡಿ ಅಂದಿದ್ದೆ. ತಮಿಳು ನಾಡಿನಲ್ಲಿ 2 ಕೋಟಿಗೂ ಹೆಚ್ಚು ಕುಟುಂಬಗಳಿಗೆ 4 ಸಾವಿರ ರೂಪಾಯಿ ಪರಿಹಾರ ಘೋಷಣೆ ಮಾಡಿದಾರೆ. ಅಂದರೆ ಸುಮಾರು 8 ಸಾವಿರ ಕೋಟಿ ರೂಪಾಯಿ ಪರಿಹಾರ ತಮಿಳುನಾಡಲ್ಲಿ ಘೋಷಣೆ ಆಗಿದೆ. ಆದರೆ ನಮ್ಮ ರಾಜ್ಯದ ಸರ್ಕಾರ ಕೇವಲ 628 ಕೋಟಿ ಪರಿಹಾರ ಘೋಷಣೆ ಮಾಡಿದೆ. ನಾನು ಈಗಲೂ ಸಂಪೂರ್ಣ ಲಾಕ್ಡೌನ್ ಮಾಡಿ, ಲಾಕ್ಡೌನ್ ಅವಧಿಯಲ್ಲಿ ಫುಡ್ ಗ್ರೈನ್ಸ್ ಮತ್ತು ಹತ್ತು ಸಾವಿರ ರೂಪಾಯಿ ಕೊಡಿ ಎಂದು ಒತ್ತಾಯಿಸುತ್ತೇನೆ. ಹಾಗೇ, ಲಾಕ್ಡೌನ್ ಅನ್ನು ಮುಂದುವರೆಸಬೇಕೆಂದು ಒತ್ತಾಯಿಸುತ್ತೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬೇರೆ ರಾಜ್ಯಗಳಲ್ಲಿ ಕೂಡ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ. ಕೇವಲ ನಮ್ಮ ರಾಜ್ಯ ಅಷ್ಟೇ ಅಲ್ಲ ಇದೇ ಪರಿಸ್ಥಿತಿ ತಮಿಳುನಾಡು, ಆಂಧ್ರಪ್ರದೇಶಕ್ಕೆ ಇದೆ. ಆದರೂ ಅವರು ಬಡವರನ್ನು ರಕ್ಷಣೆ ಮಾಡಬೇಕು. ಆ ರಾಜ್ಯದವರು 8 ಸಾವಿರ ಕೋಟಿ ಕೊಟ್ಟಿದ್ದಾರೆ. ಅವರಿಗೂ ಸಾಲ ಇದೆ, ನರೇಗಾ ಈಗ 100 ದಿನ ಕೊಡುತ್ತೇವೆ ಅಂದಿದ್ದಾರೆ. ಲಾಕ್ಡೌನ್ ಆಗಿರೋದ್ರಿಂದ 200 ದಿನ ಕೊಡ್ಬೇಕು. ಎಲ್ಲೆಲ್ಲಿ ಹಣ ಬಾಕಿಯಿದೆಯೋ ಅದನ್ನೆಲ್ಲ ಕೊಡ್ಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ