ಬೆಂಗಳೂರು: ಲಸಿಕೆ ದಾಸ್ತಾನು ಇಲ್ಲದಿದ್ದರೂ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದ್ದು, ಮೇ ಮೂರನೇ ವಾರದವರೆಗೆ ಲಸಿಕೆ ಸಿಗುವುದಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ. ಲಸಿಕೆ ಸ್ಟಾಕ್ ಇಲ್ಲದಿದ್ದ ಮೇಲೆ ಕಾರ್ಯಕ್ರಮಕ್ಕೆ ಯಾಕೆ ಚಾಲನೆ ನೀಡಬೇಕಿತ್ತು ಎಂಬುದು ಹಲವರ ಪ್ರಶ್ನೆಯಾಗಿದೆ.
ಶಿವಾಜಿನಗರದ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಅಭಿಯಾನಕ್ಕೆ ಸಿಎಂ ಯಡಿಯೂರಪ್ಪ ಸಾಂಕೇತಿಕ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಸಿಎಂ, 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಈಗ ಚಾಲನೆ ನೀಡಲಾಗಿದೆ. ಆದರೆ ಲಸಿಕೆ ಹಾಕಿಸಿಕೊಳ್ಳಲು ಮೇ ಮೂರನೇ ವಾರದ ತನಕ ಕಾಯಬೇಕು. ಈಗ ಸಾಂಕೇತಿಕ ಚಾಲನೆ ಮಾತ್ರ ಸಿಕ್ಕಿದೆ. ಕೇಂದ್ರದಿಂದ ಇಂದು ಕೇವಲ 3 ಲಕ್ಷ ಡೋಸ್ ಮಾತ್ರ ಬಂದಿದೆ ಎಂದರು.
ಈಗಾಗಲೇ 96.36 ಲಕ್ಷ ಜನ ಲಸಿಕೆ ಪಡೆದಿದ್ದಾರೆ. ಲಭ್ಯತೆಯ ಆಧಾರದ ಮೇಲೆ ಲಸಿಕೆ ನೀಡುವ ಪ್ರಕ್ರಿಯೆ ನಡೆಯಲಿದೆ. ಮೂರು ದಿನದಲ್ಲಿ ನಿಮ್ಮ ಅನುಮಾನಕ್ಕೆ ಉತ್ತರ ಸಿಗುತ್ತೆ, ಲಸಿಕೆ ಲಭ್ಯತೆ ಆಧಾರದ ಮೇಲೆ ಬರುತ್ತದೆ. ಈಗ ಇರುವ ಮೂರು ಪ್ಲಸ್ ಒಂದು ಲಕ್ಷ ಸೇರಿ ಒಟ್ಟು ನಾಲ್ಕು ಲಕ್ಷ ಡೋಸ್ ಲಸಿಕೆ ಖಾಲಿ ಆಗುವ ತನಕ 18 ವರ್ಷದ ಮೇಲ್ಪಟ್ಟವರಿಗೆ ನೀಡುತ್ತೇವೆ ಎಂದರು.
ಹೊರ ದೇಶದಿಂದ ಲಸಿಕೆ ಬರುತ್ತಿದೆ, ಶೀಘ್ರವಾಗಿ ಎಲ್ಲವೂ ಸರಿ ಹೋಗಲಿದೆ. ಇನ್ನೆರಡು ದಿನದಲ್ಲಿ ಎಲ್ಲರ ಅನುಮಾನಕ್ಕೆ ತೆರೆ ಬೀಳಲಿದೆ. ಮೋದಿಯವರು ಸಹಕಾರ ನೀಡುತ್ತಿದ್ದಾರೆ. ಇಂದಿನಿಂದ ನಮ್ಮಲ್ಲಿ ಖಾಲಿಯಾಗೋವರೆಗೂ ಲಸಿಕೆ ನೀಡುತ್ತೇವೆ. ಕಾಳ ಸಂತಯಲ್ಲಿ ಔಷಧಿ ಮಾರಾಟ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಮ್ಮ ಗಮನಕ್ಕೆ ತನ್ನಿ, ನಾವು ಕ್ರಮ ಕೈಗೊಳ್ಳುತ್ತೇವೆ. ಸಂಜೆ ಆಸ್ಪತ್ರೆ ಪ್ರಮುಖರ ಜೊತೆ ಸಹ ಸಭೆ ಇದೆ, ಚರ್ಚೆ ಮಾಡುತ್ತೇವ ಎಂದರು.
ಕೋವಿಡ್ ವಿರುದ್ಧದ ಸಮರದಲ್ಲಿ ಇದು ಮಹತ್ವದ ದಿನ, ಕೇಂದ್ರ ಸರ್ಕಾರದ ಸೂಚನೆಯಂತೆ ಇಂದಿನಿಂದ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ರಾಜ್ಯ ಸರ್ಕಾರ 18 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಲಸಿಕೆ ನೀಡುತ್ತಿದೆ. ಕೇಂದ್ರದಿಂದ ಮೂರು ಲಕ್ಷ ಡೋಸ್ ಲಸಿಕೆ ಲಭ್ಯವಾಗಿದೆ, ನಮ್ಮ ಬಳಿ ಒಂದು ಲಕ್ಷ ಡೋಸ್ ಲಭ್ಯವಿದೆ. 4 ಲಕ್ಷ ಡೋಸ್ ಲಸಿಕೆಯನ್ನು ಸದ್ಯ ನೀಡಲಾಗುವುದು. ಕೇಂದ್ರ ಸರ್ಕಾರ ಕ್ರಮ ಕೈಗೊಂಡಿರುವುದು ಸಮಯೋಚಿತವಾಗಿದೆ. ಪ್ರಧಾನಿ ಮೋದಿಯವರಿಗೆ ಅಭಿನಂದನೆ, ಈ ತಿಂಗಳಲ್ಲಿ ಇನ್ನೊಂದು ಲಸಿಕೆ ಲಭ್ಯವಾಗಲಿದೆ ಎಂದರು.
ಖಾಸಗಿ ಆಸ್ಪತ್ರೆಯಗಳಲ್ಲಿ ಲಸಿಕೆಗೆ ದರವನ್ನು ನಿಗದಿ ಮಾಡಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚು ದರ ತೆಗೆದುಕೊಂಡರೆ ಕ್ರಮ ಕೈಗೊಳ್ಳಲಾಗುವುದು. ಸರ್ಕಾರದ ಮಾರ್ಗಸೂಚಿ ಪಾಲಿಸಿ, ಜನರು ಸಹಕಾರ ನೀಡಿದರೆ ಕೋವಿಡ್ ನಿಯಂತ್ರಣ ಸಾಧ್ಯ. ಇದೇ ರೀತಿ ಸಹಕಾರ ನೀಡುವಂತೆ ಸಿಎಂ ಜನರಲ್ಲಿ ವಿನಂತಿಸಿದ್ದರೆ.
ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಮೋಹನ್, ಶಾಸಕ ರಿಜ್ವಾನ್ ಅರ್ಷದ್ ಭಾಗಿಯಾಗಿದ್ದರು. 18 ವರ್ಷದ ಮೇಲ್ಪಟ್ಟವರಿಗೆ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಸಿಎಂ ಸಾಂಕೇತಿಕವಾಗಿ ಚಾಲನೆ ನೀಡಿದರು