ಪಾಟ್ನಾ, ಏಪ್ರಿಲ್ 17: ಮೇವು ಹಗರಣಕ್ಕೆ ಸಂಬಂಧಿಸಿದಂತೆ ಆರ್ಜೆಡಿ ಮುಖ್ಯಸ್ಥ ಹಾಗೂ ಬಿಹಾರ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ಗೆ ಶನಿವಾರ ಜಾರ್ಖಂಡ್ ಹೈಕೋರ್ಟ್ ಜಾಮೀನು ನೀಡಿದೆ.
ಇದೇ ಫೆಬ್ರವರಿಯಲ್ಲಿ ಲಾಲೂ ಪ್ರಸಾದ್ ಯಾದವ್ ಅವರಿಗೆ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದ್ದು, ಎರಡು ತಿಂಗಳ ನಂತರ ಹೊಸ ಅರ್ಜಿ ಸಲ್ಲಿಸಲು ಸೂಚಿಸಿತ್ತು. ಶನಿವಾರ ಜಾಮೀನು ನೀಡಿದ್ದು, ಜೈಲಿನಿಂದ ಶೀಘ್ರವೇ ಅವರು ಹೊರ ಹೋಗಲಿರುವುದಾಗಿ ತಿಳಿದುಬಂದಿದೆ.
ಲಾಲೂ ಪ್ರಸಾದ್ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಚೈಬಾಸಾ ಖಜಾನೆಯಲ್ಲಿ 33.67 ಕೋಟಿ ಅವ್ಯವಹಾರ ಪ್ರಕರಣದ ಮೇಲೆ 2017ರಿಂದಲೂ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾಲೂ ಸೇರಿ ಒಟ್ಟು 16 ಮಂದಿಗೆ ಜೈಲು ಶಿಕ್ಷೆ ವಿಧಿಸಲಾಗಿತ್ತು. ಈ ಬಹುಕೋಟಿ ಮೇವು ಹಗರಣದಲ್ಲಿ ನಾಲ್ಕು ಪ್ರಕರಣಗಳನ್ನು ಎದುರಿಸುತ್ತಿರುವ ಲಾಲೂ ಪ್ರಸಾದ್ ಅವರಿಗೆ ಮೂರು ಪ್ರಕರಣದಲ್ಲಿ ಈಗಾಗಲೇ ಜಾಮೀನು ದೊರೆತಿದೆ.
ಲಾಲೂ ಪ್ರಸಾದ್ ಆರೋಗ್ಯ ಹದಗೆಟ್ಟ ಕಾರಣ ಈಚೆಗೆ ಅವರನ್ನು ದೆಹಲಿಯ ಏಮ್ಸ್ಗೆ ದಾಖಲಿಸಲಾಗಿತ್ತು. ತಮ್ಮ ಶಿಕ್ಷೆಯ ಅವಧಿಯನ್ನು ಅರ್ಧ ಪೂರೈಸಿದ್ದು, ಜಾಮೀನು ನೀಡಬೇಕೆಂದು ಕೋರಿ ಅವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಫೆಬ್ರವರಿಯಲ್ಲಿ ಜಾಮೀನು ತಿರಸ್ಕರಿಸಲಾಗಿತ್ತು.