ಶಿರಾ: ನಗರದ ಪ್ರವಾಸಿ ಮಂದಿರದ ಬಳಿ ಇರುವ ಉದ್ಯಾನದಲ್ಲಿ ನಿರ್ಮಿಸಿರುವ ಡಾ.ಬಿ.ಆರ್. ಅಂಬೇಡ್ಕರ್ ಅವರ ಕಂಚಿನ ಪ್ರತಿಮೆಯ ಅನಾವರಣವನ್ನು ಏ. 14ರಂದು ಹಮ್ಮಿಕೊಂಡಿದ್ದು ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ.
ಕಳೆದ ಎರಡು ವರ್ಷದಿಂದ ಪ್ರತಿಮೆ ಅನಾವರಣ ಯಾವಾಗ ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿತ್ತು. ಈ ಬಗ್ಗೆ ‘ಪ್ರಜಾವಾಣಿ’ ಮಾರ್ಚ್ 26ರಂದು ‘ಅಂಬೇಡ್ಕರ್ ಪ್ರತಿಮೆ ಅನಾವರಣ ಯಾವಾಗ?’ ಎನ್ನುವ ಲೇಖನ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಅಧಿಕಾರಿಗಳು ಅಂಬೇಡ್ಕರ್ ಜಯಂತಿಗೆ ಪ್ರತಿಮೆ ಅನಾವರಣಗೊಳಿಸಲು ಸಿದ್ಧತೆ ನಡೆಸಿದ್ದಾರೆ.
ಉದ್ಯಾನದಲ್ಲಿ ಈ ಹಿಂದೆ ಇದ್ದ ಅಂಬೇಡ್ಕರ್ ಪ್ರತಿಮೆ ಅವರನ್ನು ಹೋಲುತ್ತಿಲ್ಲ. ಪ್ರತಿಮೆ ಎತ್ತರವಾಗಿಲ್ಲ. ಅದನ್ನು ಬದಲಾಯಿಸುವಂತೆ ದಲಿತಪರ ಸಂಘಟನೆಗಳು ನಡೆಸಿದ ಹೋರಾಟಕ್ಕೆ ಮಣಿದ ನಗರಸಭೆ ಆಡಳಿತ ಕೊನೆಗೂ ಪ್ರತಿಮೆ ಬದಲಾಯಿಸಲು ಮುಂದಾಯಿತು. ಈ ಹಿನ್ನೆಲೆಯಲ್ಲಿ ಹಳೆಯ ಪ್ರತಿಮೆಯನ್ನು ಬದಲಿಸಿ ಹೊಸ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಾಯಿತು.
ಹೊಸ ಪ್ರತಿಮೆ ಸ್ಥಾಪನೆ ಮಾಡಿ ಎರಡು ವರ್ಷ ಕಳೆದರೂ ಪ್ರತಿಮೆಯ ಅನಾವರಣಕ್ಕೆ ಮುಹೂರ್ತ ಇದುವರೆಗೂ ಕೂಡಿ ಬಂದಿರಲಿಲ್ಲ. ಈಗಲಾ ದರೂ ಅನಾವರಣ ಮಾಡುತ್ತಿ ರುವುದು ಸಂತಸದ ವಿಷಯವಾಗಿದೆ.
ಅಂಬೇಡ್ಕರ್ ಪ್ರತಿಮೆ ಅನಾವರಣದ ಜೊತೆಗೆ ಪ್ರವಾಸಿ ಮಂದಿರದ ವೃತ್ತಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ವೃತ್ತ ಎಂದು ನಾಮಕರಣ ಮಾಡುತ್ತಿರುವುದು ದಲಿತಪರ ಸಂಘಟನೆಗಳು ಬಹುದಿನದ ಹೋರಾಟಕ್ಕೆ ಜಯ ದೊರೆತಂತಾಗಿದೆ.