ವಿಜಯಪುರ: ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿಯ ಸಹೋದರ ಸ್ಫೋಟಕ ಹೇಳಿಕೆಯೊಂದನ್ನ ನೀಡಿದ್ದಾರೆ. ನನ್ನ ಸಹೋದರಿ ಮೇಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಒತ್ತಡ ಇದೆ ಎಂದು ಅವರು ಆರೋಪಿಸಿದ್ದಾರೆ.
ಇಂದು ವಿಜಯಪುರದಲ್ಲಿ ಮಾತನಾಡಿದ ಅವರು, ನಾನು ಪ್ರೂಫ್ ಸಮೇತ ಹೇಳ್ತಿದ್ದೇನೆ.. ಪ್ರಕರಣದ ತನಿಖೆಯಾಗಲಿ, ಎಲ್ಲವೂ ಹೊರ ಬರುತ್ತೆ. ಸತ್ಯ ಮುಚ್ಚಲು ಆಗಲ್ಲ. ಇಂದಿಲ್ಲ ನಾಳೆ ಡಿ.ಕೆ. ಶಿವಕುಮಾರ್ ಹೆಸರು ಹೊರಗೆ ಬಂದೇ ಬರುತ್ತೆ. ನಾವು ಎಲ್ಲ ಸಾಕ್ಷಿಗಳನ್ನ ಎಸ್ಐಟಿಗೆ ನೀಡಿದ್ದೇವೆ. ನಮ್ಮ ಬಳಿ ಇನ್ನೂ 9 ಸಾಕ್ಷಿಗಳು ಇವೆ. ಸಂದರ್ಭ ಬಂದಲ್ಲಿ ಆ ಸಾಕ್ಷಿಗಳನ್ನು ಸ್ಫೋಟ ಮಾಡುತ್ತೇನೆ ಎಂದರು. 11 ರಲ್ಲಿ ಬರೀ ಎರಡು ಸಾಕ್ಷಿ ಹೊರಬಿಟ್ಟಿದ್ದೇವೆ, ಇನ್ನೂ 9 ಇವೆ. ಆ ಸಾಕ್ಷಿಗಳು ಡಿ.ಕೆ. ಶಿವಕುಮಾರ್ಗೆ ಮುಳುವಾಗುತ್ತವೆ. ನಾನು ಸೇಫ್ ಆಗಿದ್ದೀನಿ ಎನ್ನುವ ಸಾಕ್ಷ್ಯಗಳಿವೆ ಎಂದು ಹೇಳುವ ಮೂಲಕ ತಮ್ಮ ಬಳಿ ಮತ್ತೊಂದಿಷ್ಟು ಆಡಿಯೋಗಳು ಇರುವ ಸುಳಿವು ನೀಡಿದ್ದಾರೆ.
ಸಹೋದರಿ ಮಾತನಾಡ್ತೀನಿ ಅಂತಿದ್ದಾಳೆ.. ಆದ್ರೆ ಯಾಕೆ ಮಾತನಾಡಲು ಬಿಡ್ತಿಲ್ಲ ಅನ್ನೋದೇ ಗೊತ್ತಿಲ್ಲ. ಎಸ್ಐಟಿ ವಿಚಾರಣೆ ವೇಳೆ ಕಣ್ಣೀರು ಹಾಕಿದ್ದು ನನಗೆ ಬೇಜಾರಾಗಿದೆ. ನನ್ನ ಸಹೋದರಿಗೆ ಒತ್ತಡ ಹಾಕಿ ಇಟ್ಟಿದ್ದಾರೆ. 28 ದಿನಗಳಿಂದ ನಮ್ಮಿಂದ ದೂರ ಇದ್ದಾಳೆ ಅಂದ್ರೆ ನಮ್ಮನ್ನು ಮರೆತು ಬಿಟ್ಟಿರುತ್ತಾಳಾ? ತಂದೆ ತಾಯಿ ಜೊತೆಗೆ ಮಾತನಾಡ್ತಿಲ್ಲ ಎಂದರೆ ಎಷ್ಟು ಕಷ್ಟದಲ್ಲಿ ಇರಬೇಕು ನೋಡಿ. ನಮ್ಮ ಸಹೋದರಿಯನ್ನ ಹೆದರಿಸಿ ಇಟ್ಟಿದ್ದಾರೆ. ಎಸ್ಐಟಿ ಅಧಿಕಾರಿಗಳಿಗೆ ಸಹೋದರಿಯನ್ನ ಭೇಟಿ ಮಾಡಿಸಲು ಮನವಿ ಮಾಡಿದ್ದೀವಿ. ಆಕೆಗೆ ಪೋನ್ ಮಾಡಿಯೂ ಮಾತನಾಡಲು ಬಿಡ್ತಿಲ್ಲ. ಆಕೆಯೇ ಮಾತನಾಡ್ತಿಲ್ಲ ಅಂತಿದ್ದಾರೆ, ಹೇಗೆ ನಂಬಬೇಕು? ಎಂದು ಸಂತ್ರಸ್ತೆಯ ಸಹೋದರ ಹೇಳಿಕೆ ನೀಡಿದ್ದಾರೆ.