ಬೆಂಗಳೂರು : 2020-21ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷಾ ಪ್ರಶ್ನೆಪತ್ರಿಕೆಯ ಸ್ವರೂಪದ ಬಗ್ಗೆ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗಿದ್ದರು. ಇಂತಹ ಗೊಂದಲಕ್ಕೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಪರೀಕ್ಷಾ ಪ್ರಶ್ನೆಪತ್ರಿಕೆ ಸ್ವರೂಪದ ಗೊಂದಲಕ್ಕೆ ತೆರೆ ಎಳೆದಿದೆ.
ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಹಾಗೂ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಅಧ್ಯಕ್ಷರು ಮಾಹಿತಿ ನೀಡಿದ್ದು, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟವನ್ನು ವೃದ್ಧಿಸಲು ಮತ್ತು ತಾರ್ಕಿಕ ಚಿಂತನೆಯನ್ನು ಬೆಳೆಸಲು ಅನುಗುಣವಾಗುವಂತೆ ಉಲ್ಲೇಖ-01ರಂತೆ 2019-20ನೇ ಸಾಲಿನಿಂದ ಪ್ರಶ್ನೆ ಪತ್ರಿಕೆ ವಿನ್ಯಾಯಸವನ್ನು ಬದಲಾವಣೆ ಮಾಡಿದ್ದು, ಬಹು ಆಯ್ಕೆಯ ಪ್ರಶ್ನೆಗಳನ್ನು ಕಡಿಮೆ ಮಾಡಿ, ಅನ್ವಯ, ಕೌಶಲ್ಯ ಹಾಗೂ ವಿವರಣಾತ್ಮಕ ಉತ್ತರ ಬರೆಯುವ ಪ್ರಶ್ನೆಗಳಿಗೆ ಆದ್ಯತೆ ನೀಡಲಾಗಿದೆ.
ಪ್ರಸ್ತುತ ಉಲ್ಲೇಖ-2ರಂತೆ 2020-21ನೇ ಸಾಲಿನಲ್ಲಿ ಕೋವಿಡ್-19ರ ಕಾರಣದಿಂದಾಗಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ನೇರ ಬೋಧನೆ ಕಲಿಕೆಯು ದಿನಾಂಕ 01-01-2021ರಿಂದ ಪ್ರಾರಂಭವಾಗಿದ್ದು, ಮೌಲ್ಯಮಾಪನಕ್ಕೆ ಗುರುತಿಸಿರುವ ವಿಷಯಾಂಶಗಳ ಆಧಾರದ ಮೇಲೆ ಜೂನ್-2021ರ ಪರೀಕ್ಷೆಯ ಪ್ರಶ್ನೆಪತ್ರಿಕೆಗಳಲ್ಲಿ ಮಾರ್ಪಾಡುಗಳನ್ನು ಮಾಡಲಾಗಿದೆ. ಈ ಕೆಳಕಂಡ ವಿವರಗಳೊಂದಿಗೆ ಅನುಬಂಧ-1ರಲ್ಲಿ ಲಗತ್ತಿಸಿದೆ ಎಂಬುದಾಗಿ ತಿಳಿಸಿದ್ದಾರೆ.
- ಪ್ರಶ್ನೆ ಪತ್ರಿಕೆಯ ವಿನ್ಯಾಸದಲ್ಲಿ ಯಾವುದೇ ರೀತಿಯ ಬದಲಾವಣೆಗಳಿರುವುದಿಲ್ಲ.
- ಉಲ್ಲೇಖ-2ರಂತೆ ಮೌಲ್ಯಮಾಪನಕ್ಕೆ ಗುರುತಿಸಿರುವ ವಿಷಯಾಂಶಗಳ ಆಧಾರದ ಮೇಲೆ ( ಶೇ.30ರಷ್ಟು ಕಡಿತದ ಪಠ್ಯವಸ್ತು ಆಧರಿಸಿ) ಪ್ರಸ್ತುತ ವರ್ಷದ ಶಾಲಾ ವಿದ್ಯಾರ್ಥಿಗಳಿಗೆ (CCERF) ಪ್ರಶ್ನೆಪತ್ರಿಕೆಯನ್ನು ರಚಿಸಲಾಗುವುದು.ಈ ಮಾದರಿ ಪ್ರಸ್ತುತ ವರ್ಷವೂ ಸೇರಿದಂತೆ ಒಟ್ಟು 6 ಪ್ರಯತ್ನಗಳಿಗೆ ಮಾತ್ರ ಸೀಮಿತವಾಗಿರುತ್ತವೆ. ಉಳಿದಂತೆ ಈ ಹಿಂದಿನ ವರ್ಷಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ( CCERR, CCEPR, NSR & NSPR) ಮತ್ತು ಪ್ರಸ್ತುತ ವರ್ಷ ಖಾಸಗಿಯಾಗಿ ನೋಂದಾಯಿಸುವ ವಿದ್ಯಾರ್ಥಿಗಳಿಗೆ ( CCEPF) ಈ ವಿಧಾನ ಅನ್ವಯವಾಗುವುದಿಲ್ಲ ಎಂಬುದಾಗಿ ತಿಳಿಸಿದ್ದಾರೆ.