ಬಹಳ ಕಷ್ಟದಿಂದ ಸರ್ಕಾರವನ್ನು ನಡೆಸಿಕೊಂಡು ಬರುತ್ತಿರುವ ಸಿಎಂ ಯಡಿಯೂರಪ್ಪನವರಿಗೆ ಮತ್ತೊಂದು ಸಂಕಟ ಎದುರಾಗಿದೆ. 2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಬೀಳಿಸುವಲ್ಲಿ ಸಿಎಂ ಬಿಎಸ್ವೈ ಪ್ರಮುಖ ಪಾತ್ರ ವಹಿಸಿದ್ದಾರೆಂಬುದಕ್ಕೆ ಸಾಕ್ಷಿಯಾಗಿದ್ದ ಆಡಿಯೋ ಕ್ಲಿಪ್ ಒಂದರ ತನಿಖೆಯನ್ನು ಮುಂದುವರೆಸಲು ನ್ಯಾಯಾಲಯ ಆದೇಶ ನೀಡಿದೆ.
ಗುರುಮಠಕಲ್ ಕ್ಷೇತ್ರದ ಶಾಸಕ ನಾಗನಗೌಡ ಕಂದಕೂರ ಅವರ ಪುತ್ರ ಶರಣಗೌಡ ಪಾಟೀಲ ದೂರು ನೀಡಿದ್ದರು. ಇದಕ್ಕೆ ಸಾಕ್ಷಿಯಾಗಿ ಖುದ್ದು ಯಡಿಯೂರಪ್ಪನವರೇ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕೂಡಾ ಬಿಡುಗಡೆಯಾಗಿತ್ತು. ಈ ಪ್ರಕರಣದ ತನಿಖೆಗೆ ಯಡಿಯೂತಪ್ಪನವರು ಹೈಕೋರ್ಟ್ನಿಂದ ತಡೆಯಾಜ್ಞೆಯನ್ನು ತಂದಿದ್ದರು.
ಈಗ ಹೈಕೋರ್ಟ್ನ ಕಲಬುರ್ಗಿ ವಿಶೇಷ ನ್ಯಾಯಪೀಠ ಈ ಪ್ರಕರಣದ ತನಿಖೆ ನಡೆಸಲು ಆದೇಶ ನೀಡಿದೆ. ಆಡಿಯೋ ಬಿಡುಗಡೆಯಾದ ವೇಳೆ ಅಂದಿನ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಅವರು, ವಿಶೇಷ ತನಿಖಾ ದಳ ರಚಿಸುವಂತೆ ಸರ್ಕಾರಕ್ಕೆ ಸೂಚಿಸಿದ್ದರು. ಆದರೆ, ಅಂದು ಸಿಎಂ ಆಗಿದ್ದ ಕುಮಾರಸ್ವಾಮಿ ಅವರು, ರಮೇಶ್ ಕುಮಾರ್ರವರ ಸೂಚನೆಯನ್ನು ಪರಿಗಣಿಸಿರಲಿಲ್ಲ. ಬಿಜೆಪಿ ನಾಯಕರು, ಪ್ರಕರಣದ ತನಿಖೆಯ ವಿರುದ್ದ ತಡೆಯಾಜ್ಞೆ ಪಡೆಯುವಲ್ಲಿ ಯಶಸ್ವಿಯಾದರು.
ಶರಣಗೌಡ ಕಂದಕೂರ ಪರ ಹಿರಿಯ ನ್ಯಾಯವಾದಿ ರವಿವರ್ಮ ಕುಮಾರ್ ಮತ್ತು ಪಿ.ವಿಲಾಸ್ ಕುಮಾರ್ ವಾದ ಮಂಡಿಸಿದ್ದರೆ, ಯಡಿಯೂರಪ್ಪ ಪರ ಅಶೋಕ್ ಹಾರನಹಳ್ಳಿ, ಸಿ.ವಿ.ನಾಗೇಶ್ ಮತ್ತು ಸರ್ಕಾರಿ ವಕೀಲರಿಂದ ವಾದ ಮಂಡನೆ ಮಾಡಲಾಗಿತ್ತು. ಕೊನೆಗೆ ವಾದ ವಿವಾದ ಆಲಿಸಿದ ಹೈಕೋರ್ಟ್ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಯಡಿಯೂರಪ್ಪ ವಿರುದ್ಧದ ಅಪರೇಷನ್ ಕಮಲ ಆಡಿಯೋ ಪ್ರಕರಣದ ತನಿಖೆಗೆ ಅವಕಾಶ ಕಲ್ಪಿಸಿ ಆದೇಶಿಸಿದೆ.