ಬೆಂಗಳೂರು: ನಮ್ಮ ವಕೀಲರು ಮಾಧ್ಯಮದ ಜೊತೆ ಮಾತನಾಡಬೇಡಿ ಅಂದಿದ್ದಾರೆ. ಆದರೆ, ನೀವೂ ಮುಂಜಾನೆಯಿಂದ ಕಾಯ್ತಿದ್ದೀರಿ. ಅದಕ್ಕೆ ಮಾತನಾಡ್ತಿದ್ದೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು. ತಮ್ಮ ನಿವಾಸದಲ್ಲಿ ಇಂದು ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಡಿ ವಿಚಾರವಾಗಿ ಅಧಿಕೃತವಾಗಿ ನಾನು ದೂರು ನೀಡಿದ್ದೇನೆ. ಎಲ್ಲಾ ರಾಜಕೀಯದವರು ಮಾಡಿರುವ ಷಡ್ಯಂತ್ರ. ಬ್ಲಾಕ್ ಮೇಲ್ ಮಾಡಿದ್ದಾರೆ. ಅದಕ್ಕಾಗಿ ದೂರು ನೀಡಿದ್ದೇನೆ. ದಾರಿ ತಪ್ಪಿಸುವ ರೀತಿ ಮಾಡಬೇಡಿ. ಇವತ್ತು ಎಫ್ ಐಆರ್ ದಾಖಲಾಗಿದೆ ಎಂದರು.
ನಾನು ಬೇಕಾದರೂ ವಿಚಾರಣೆಗೆ ಹೋಗ್ತಿನಿ. ನಾವು ನೇರವಾಗಿ ಹೆಸರು ಹೇಳಿದರೆ ಕೇಸ್ ವೀಕ್ ಆಗ್ತದೆ. ನೇರವಾಗಿ ಹೆಸರು ಹೇಳುವುದು ತಪ್ಪಾಗುತ್ತದೆ. 2+3+4 ಅವರು ಮುಖ್ಯವಾದರೂ ಅವರ ಹಿಂದೆ ಇನ್ನು ತುಂಬಾ ಹೆಚ್ಚಿನ ಜನ ಇದ್ದಾರೆ. ಕಾನೂನಿನಲ್ಲಿ ಅವಕಾಶವಿದೆ. ಅದಕ್ಕೆ ನಾಗರಾಜರನ್ನು ಕಳುಹಿಸಿದ್ದೇನೆ. ಮುಂದಿನ ದಿನಗಳಲ್ಲಿ ವಿಚಾರಣೆಗೆ ಹೋಗ್ತಿನಿ. ಪೊಲೀಸರು ತುಂಬಾ ಸ್ಪೀಡ್ ಆಗಿ ತನಿಖೆ ಮಾಡ್ತಿದ್ದಾರೆ. ಇನ್ನು ಎರಡು ಮೂರು ದಿನಗಳ ಒಳಗೆ ಗೊತ್ತಾಗಬಹುದು. ಯಶವಂತಪುರದಲ್ಲಿ ಷಡ್ಯಂತ್ರ ಮಾಡಿದ್ದಾರೆ ಅಂತಾ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಅತಿ ಶೀಘ್ರದಲ್ಲೇ ಅವರ ಹೆಸರುಗಳು ಬಯಲಿಗೆ ಬರುತ್ತದೆ ಎಂದು ಹೇಳಿದರು.ರಮೇಶ್ ಜಾರಕಿಹೊಳಿ ಪರವಾಗಿ ನೆಲಮಂಗಲದ ಮಾಜಿ ಶಾಸಕ ನಾಗರಾಜ್ ಅವರು ಸದಾಶಿವನಗರದಲ್ಲಿ ದೂರು ಕೊಟ್ಟಿದ್ದಾರೆ. ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಾಗರಾಜ್ ಅವರು, ಸಿಡಿ ಬಿಡುಗಡೆಯಿಂದ ಮಾನಹಾನಿಯಾಗಿದೆ. ರಾಜಕೀಯ ಷಡ್ಯಂತ್ರ ರೂಪಿಸಲಾಗಿದೆ.
ಬ್ಲಾಕ್ ಮೇಲ್ ಮಾಡಲಾಗಿದೆ. ಎಸ್ಐಟಿ ರಚನೆಯಾಗಿದೆ, ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ದೂರು ನೀಡಲಾಗಿದೆ. ಯಾರ ಹೆಸರಿನಲ್ಲೂ ದೂರು ಕೊಟ್ಟಿಲ್ಲ. ಬಾಲಚಂದ್ರ ಜಾರಕಿಹೊಳಿ ದೆಹಲಿಯಲ್ಲಿ ಇದ್ದಾರೆ. ವಕೀಲರ ಜೊತೆ ಚರ್ಚೆ ಮಾಡ್ತಿದ್ದಾರೆ. ವಕೀಲರ ಸೂಚನೆ ಮೇರೆಗೆ ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ನೀಡಲಾಗಿದೆ. ರಮೇಶ್ ಜಾರಕಿಹೊಳಿ ಅವರೇ ನೇರವಾಗಿ ಬಂದು ದೂರು ನೀಡಬಹುದಿತ್ತು. ಪರವಾಗಿಲ್ಲ ನೀವೇ ಕೊಡಿ ಅಂತ ಹೇಳಿದ್ದಾರೆ. ಹಣಕ್ಕೆ ಬ್ಲಾಕ್ ಮೇಲ್ ಮಾಡಿರುವ ಬಗ್ಗೆ ದೂರು ನೀಡಲಾಗಿದೆ ಎಂದು ಮಾಜಿ ಶಾಸಕ ನಾಗರಾಜ್ ಹೇಳಿದ್ದಾರೆ. ರಮೇಶ್ ಜಾರಕಿಹೊಳಿ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 120B, 385, 465, 469 ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.
ರಮೇಶ್ ಜಾರಕಿಹೊಳಿ ಎಫ್ಐಆರ್ ನ ಪ್ರಮುಖ ಅಂಶಗಳು
- ಬೆಂಗಳೂರಿನ ಅಪರಿಚಿತ ವ್ಯಕ್ತಿಗಳ ವಿರುದ್ಧ ದಾಖಲಾದ ಎಫ್ಐಆರ್.
- ರಾಜಕೀಯವಾಗಿ ಮುಗಿಸಲು, ಹಣ ವಸೂಲಿ ಮಾಡಲು, ರಾಜಕೀಯ ತೇಜೊವಧೆ ಮಾಡಲು ಷಡ್ಯಂತ್ರ ರೂಪಿಸಲಾಗಿದೆ.
- ಸುಮಾರು 3 ತಿಂಗಳಿಂದ ಸದಾಶಿವನಗರದಲ್ಲಿ ನನ್ನ ವಿರುದ್ಧ ಮಸಲತ್ತು ಮತ್ತು ಮೋಸ ಮಾಡಿ ನಕಲಿ ಸಿಡಿ ಸೃಷ್ಟಿಸಲಾಗಿದೆ.
- ಮಾನಸಿಕ ಹಿಂಸೆ ಹಾಗೂ ರಾಜಕೀಯ ಮಾನಹಾನಿ ಮಾಡಿ ಹಣ ಪಡೆಯಲು ಪ್ರಯತ್ನ.
- ಇದರ ಹಿಂದೆ ಹಲವಾರು ಜನರು ಇದ್ದಾರೆ.
- ಕೆಲವರು ಷಡ್ಯಂತ್ರ ರಚಿಸಿದ್ದಾರೆ.
- ಇನ್ನೂ ಕೆಲವರು ನಕಲಿ ಸಿಡಿ ತಯಾರಿಸಲು ಭಾಗಿಯಾಗಿದ್ದು ಇತರರನ್ನು ಬಳಸಿಕೊಂಡು ಅಂತರ್ಜಾಲದಲ್ಲಿ ಸಿಡಿ ಬಿಡುಗಡೆ ಮಾಡಿದ್ದಾರೆ.
- ಈ ಮೂಲಕ ರಾಜಕೀಯ ಅಸ್ಥಿರತೆ ಸೃಷ್ಟಿಸಲು ಪ್ರಯತ್ನಿಸಿದ್ದು ಇಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು.