ಬೆಂಗಳೂರು, ಮಾ.10- ದೇಶ-ವಿದೇಶಗಳಿಂದ ರಾಜ್ಯಕ್ಕೆ ಬರುವ ಪ್ರವಾಸಿಗರಿಗೆ ವಿಶ್ವ ದರ್ಜೆಯ ಸೌಲಭ್ಯಗಳನ್ನು ಕಲ್ಪಿಸಲು ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ತ್ರಿಸ್ಟಾರ್ ಹೋಟೆಲ್ ನಿರ್ಮಾಣ ಮಾಡಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ.
ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರಾದ ಸಿ.ಪಿ.ಯೋಗೇಶ್ರ್ವ ಅವರು ಮೆ: ರೈಟ್ಸ ಸಂಸ್ಥೆ ಅಧಿಕಾರಿಗಳು ಹಾಗೂ ಕೆ ಎಸ್ ಟಿ ಡಿ ಸಿ ಅಕಾರಿಗಳ ಜೊತೆ ಸಭೆಯಲ್ಲಿ ಮಾತನಾಡಿದರು. ರಾಜ್ಯದ ಪ್ರಖ್ಯಾತ ಪ್ರವಾಸಿ ತಾಣಗಳಾದ ಬೇಲೂರು, ಹಂಪಿ, ಬಾದಾಮಿ ಹಾಗೂ ವಿಜಯಪುರಗಳಲ್ಲಿ ಹೊಟೇಲ್ ನಿರ್ಮಾಣದ ಯೋಜನೆ ಇದ್ದು , ಕಾಮಗಾರಿಗಳನ್ನು 18 ತಿಂಗಳಲ್ಲಿ ಪೂರ್ಣಗೊಳಿಸಿ ಸೇವೆಗೆ ಸಮರ್ಪಿಸಲಾಗುವುದು ಎಂದು ಮಾಹಿತಿ ನೀಡಿದರು.
ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಈ ಸಂಬಂಧ ಮೆ.ರೈಟ್ಸ್ ಸಂಸ್ಥೆಯ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಮುಂದಿನ ತಿಂಗಳು ನಾಲ್ಕು ಹೋಟೆಲ್ಗಳಿಗೆ ಗುದ್ದಲಿ ಪೂಜೆ ಮಾಡಿ ಕಾಮಗಾರಿ ಆರಂಭಿಸು ವುದಾಗಿ ಸಚಿವರು ತಿಳಿಸಿದರು.
ವಿಜಯಪುರದಲ್ಲಿ 16.74 ಕೋಟಿ ರೂ. ವೆಚ್ಚದಲ್ಲಿ 57 ಕೊಠಡಿ ಗಳ , ಬಾದಾಮಿಯಲ್ಲಿ 18.32 ಕೋಟಿ ವೆಚ್ಚದಲ್ಲಿ 72 ,ಹಂಪಿಯಲ್ಲಿ 28.20 ಕೋಟಿ ರೂ. ವೆಚ್ಚದಲ್ಲಿ 75-100 ಕೊಠಡಿಗಳು ಹಾಗೂ ಬೇಲೂರಿನಲ್ಲಿ 20.71 ಕೋಟಿ ರೂ. ವೆಚ್ಚದಲ್ಲಿ 75 ಕೊಠಡಿಗಳ ತ್ರಿಸ್ಟಾರ್ ಹೋಟೆಲ್ ನಿರ್ಮಾಣ ಮಾಡ ಲಾಗುವುದು ಎಂದು ವಿವರಿಸಿದರು. ಹಂಪಿ, ಬೇಲೂರು,ಬಾದಾಮಿ ಹಾಗೂ ವಿಜಯಪುರಗಳಲ್ಲಿ ಪ್ರವಾಸಿಗರಿಗೆ ತಂಗಲು ಸೂಕ್ತ ಹೋಟೆಲ್ಗಳ ಸೌಲಭ್ಯವಿರಲಿಲ್ಲ. ಹೀಗಾಗಿ ಈ ಸ್ಥಳಗಳಲ್ಲಿ ಹೋಟೆಲ್ಗಳನ್ನು ನಿರ್ಮಿಸುವುದಾಗಿ ತಿಳಿಸಿದರು.
ಹಂಪಿಯಲ್ಲಿ 9.5 ಎಕರೆ, ಬೇಲೂರಿನಲ್ಲಿ ಯಗಚಿ ಅಣೆಕಟ್ಟೆ ಸಮೀಪದ 6 ಎಕರೆ ಪ್ರದೇಶದಲ್ಲಿ , ಬಾದಾಮಿಯ ಬನಶಂಕರಿ ದೇವಾಲಯದ ಸಮೀಪ ಹಾಗೂ ವಿಜಯಪುರದಲ್ಲಿ 10 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಹಾಗೂ ಸುಸಜ್ಜಿತವಾದ ಹೋಟೆಲ್ಗಳನ್ನು ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರೀತಿ ರಾಜಿ ಆಗದಂತೆ ಸುಂದರ ವಿನ್ಯಾಸದೊಂದಿಗೆ ಹೊಟೇಲ್ ಗಳನ್ನು ನಿರ್ಮಾಣ ಮಾಡುವಂತೆ ಒಪ್ಪಂದ ಮಾಡಿಕೊಂಡ ಕಂಪೆನಿಗೆ ಸೂಚಿಸಿದರು.
ಮೆ. ರೈಟ್ಸ್ ಸಂಸ್ಥೆಯ ಹಿರಿಯ ಉಪ ಮುಖ್ಯ ವ್ಯವಸ್ಥಾಪಕ ಎಂ.ಜಿ.ಸುದೀಪ್, ವಾಸ್ತುಶಿಲ್ಪಿ ಬಾಲಯ್ಯ , ವ್ಯವಸ್ಥಾಪಕರಾದ ನೇಹಾ ಜೈನ್ ಹಾಗೂ ಎಂಜಿನಿಯರ್ ಗಿರೀಶ್ , ಕೆಎಸ್ಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಶರ್ಮ, ಜಂಗಲ್ ಲಾಡ್ಜ್ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್ ಸಭೆಯಲ್ಲಿ ಭಾಗವಹಿಸಿದ್ದರು.