ಮೈಸೂರು: ಮೇಯರ್ ಸ್ಥಾನಕ್ಕೆ ಜೆಡಿಎಸ್ನಲ್ಲಿ ಆರು ಜನರು ಆಕಾಂಕ್ಷಿಗಳಿದ್ದರೂ; ರುಕ್ಮಿಣಿ ಅವರನ್ನೇ ಕುಮಾರಸ್ವಾಮಿ ಆಯ್ಕೆ ಮಾಡಿದ್ದರ ಹಿಂದೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ಬಲವರ್ಧನೆಗೊಳಿಸುವ ತಂತ್ರಗಾರಿಕೆ ಇದೆ ಎನ್ನಲಾಗಿದೆ.
ರುಕ್ಮಿಣಿ ಪತಿ ಮಾದೇಗೌಡ, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶ್ರೀರಾಮಪುರ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಜೆಡಿಎಸ್ ಸದಸ್ಯರು. ಶಾಸಕ ಜಿ.ಟಿ.ದೇವೇಗೌಡ, ಜಿಲ್ಲಾ ಪಂಚಾಯಿತಿ ಚುನಾವಣೆ ಸಂದರ್ಭ ಮಾದೇಗೌಡರಿಗೆ ಟಿಕೆಟ್ ನಿರಾಕರಿಸಿದ್ದರು. ಮಾದೇಗೌಡ, ಕುಮಾರಸ್ವಾಮಿ ಬಳಿಗೆ ತೆರಳಿ ಮಾತುಕತೆ ನಡೆಸಿ ಪಕ್ಷದ ‘ಬಿ’ ಫಾರಂ ಗಿಟ್ಟಿಸಿಕೊಂಡಿದ್ದರು. ಇದರ ಜೊತೆಗೆ ಗೆಲುವಿಗೆ ಶ್ರಮಿಸುವಂತೆ ಜಿಟಿಡಿಗೆ ಸೂಚನೆ ನೀಡುವಂತೆಯೂ ಕೋರಿಕೊಂಡಿದ್ದರು. ಅದರಂತೆ ಶಾಸಕರ ಬಲದಿಂದ ವಿಜಯಶಾಲಿಯಾಗಿದ್ದರು.
ಆರಂಭದಿಂದಲೂ ಮಾದೇಗೌಡ, ಜಿ.ಟಿ.ದೇವೇಗೌಡ ಹಾಗೂ ಕುಮಾರಸ್ವಾಮಿ ಬೆಂಬಲಿಗರಾಗಿಯೇ ಗುರುತಿಸಿಕೊಂಡಿದ್ದಾರೆ. ಈಗಲೂ ನಿಕಟ ಸಂಪರ್ಕದಲ್ಲಿದ್ದಾರೆ. ಬದಲಾದ ಕಾಲಘಟ್ಟದಲ್ಲಿ ಜಿಟಿಡಿ ಏನಾದರೂ ಜೆಡಿಎಸ್ ತೊರೆದರೆ? ಪರ್ಯಾಯ ಅಭ್ಯರ್ಥಿ ತಯಾರಿಗೆ ಕುಮಾರಸ್ವಾಮಿ ಈಗಿನಿಂದಲೇ ವೇದಿಕೆ ಸಿದ್ಧಗೊಳಿಸುತ್ತಿದ್ದಾರೆ ಎಂಬುದು ಜೆಡಿಎಸ್ ಮೂಲದಿಂದ ಖಚಿತಪಟ್ಟಿದೆ.