ಚಿತ್ರದುರ್ಗ : ಸಿಎಂ ಯಡಿಯೂರಪ್ಪ ಅವರಿಗೆ ದಣಿವಾಗಿದೆ. ಅವರ ಕುಟುಂಬವೇ ಸರ್ಕಾರವನ್ನು ನಡೆಸುತ್ತಿದೆ. ಅವರ ಮಗ ವಿಜಯೇಂದ್ರ, ಇಡೀ ಕುಟುಂಬ ಕಾವೇರಿ ನಿವಾಸದಲ್ಲಿ ನೇರವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಇದನ್ನು ಹೈಕಮಾಂಡ್ ಗಮನಿಸುತ್ತಿದೆ. ತಮ್ಮ ಕುಟುಂಬವನ್ನು ಮತ್ತಷ್ಟು ಉದ್ಧಾರ ಮಾಡಲು ಯಡಿಯೂರಪ್ಪ ಸಿಎಂ ಆಗಿ ಉಳಿದಿದ್ದಾರೆ. ಅವರು ಆದಷ್ಟು ಬೇಗ ರಾಜಕೀಯ ನಿವೃತ್ತಿ ಪಡೆದು ಮೊಮ್ಮಕ್ಕಳನ್ನು ಆಡಿಸಲಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಜವಗೊಂಡನಹಳ್ಳಿ ಗ್ರಾಮದಲ್ಲಿ ನಿನ್ನೆ ಮಾತನಾಡಿರುವ ಶಾಸಕ ಯತ್ನಾಳ್, ನಾನು ಯಡಿಯೂರಪ್ಪನವರ ಮನೆಗೆ ಹೋಗಿ ಮಂತ್ರಿ ಮಾಡಿ ಎಂದು ಕೈ ಕಾಲು ಹಿಡಿದಿಲ್ಲ. ನನಗೆ ತಾಕತ್ ಇದ್ದರೆ ಮುಂದೆ ಸಚಿವನಾಗುತ್ತೇನೆ. ಯಡಿಯೂರಪ್ಪ ತಮ್ಮ ಚೇಲಾಗಳ ಮೂಲಕ ವೈಯಕ್ತಿಕ ಹೇಳಿಕೆ ಎಂದಿದ್ದಾರೆ. ಕರ್ನಾಟಕದ ಸಿಎಂ ಆಗಿ ಅವರು ಮೀಸಲಾತಿ ಕುರಿತು ಜವಾಬ್ದಾರಿಯಿಂದ ಮಾತನಾಡಬೇಕು. ಅವರ ಆರೋಗ್ಯ ಕ್ಷೀಣಿಸಿದೆ, ಸಿಎಂ ಬೆಳಿಗ್ಗೆ ಒಂದು ಸಂಜೆ ಒಂದು ಹೇಳುತ್ತಿದ್ದಾರೆ. ಅವರು ಇನ್ನು ವಿಶ್ರಾಂತಿ ಪಡೆಯುವುದು ಒಳ್ಳೆಯದು. ಅವರ ಹೇಳಿಕೆಯಿಂದ ಎಲ್ಲಾ ಸಮುದಾಯದಲ್ಲಿ ಆಕ್ರೋಶ ಉಂಟಾಗುತ್ತಿದೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪನವರ ವಿರುದ್ದ ಕಿಡಿ ಕಾರಿದ್ದಾರೆ.