ಬೆಂಗಳೂರು (ಫೆ. 7): ಕುರುಬ ಸಮುದಾಯ ಬೃಹತ್ ಸಮಾವೇಶಕ್ಕೆ ಇಂದು ರಾಜಧಾನಿ ಸಾಕ್ಷಿಯಾಗಲಿದೆ. ಈ ಮೂಲಕ ತಮ್ಮ ಮೀಸಲಾತಿಯ ಕೂಗನ್ನು ಸರ್ಕಾರಕ್ಕೆ ಮುಟ್ಟಿಸಲು ಸಮುದಾಯ ನಿರ್ಧರಿಸಿದೆ. ಈಗಾಗಲೇ ಕಾಗಿನೆಲೆ ಪೀಠದ ಶ್ರೀ ನಿರಂಜನಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ಕಾಗಿನೆಲೆಯಿಂದ ಬೆಂಗಳೂರಿಗೆ ಯಶಸ್ವಿ ಪಾದಯಾತ್ರೆಯನ್ನು ನಡೆಸಲಾಗಿದೆ. ನಗರದ ಹೊರವಲದಲ್ಲಿರುವ ಮಾದಾವರ ಅಂತಾರಾಷ್ಟ್ರೀಯ ಪ್ರದರ್ಶನ ಮೈದಾನದಲ್ಲಿ ಇಂದು ಬೃಹತ್ ಸಮಾವೇಶ ನಡೆಯಲಿದ್ದು, ಸುಮಾರು 10 ಲಕ್ಷಕ್ಕೂ ಹೆಚ್ಚು ಜನ ಭಾಗಿಯಾಗುವ ನಿರೀಕ್ಷೆ ಇದೆ. ರಾಜ್ಯ ಸರ್ಕಾರ ನಮ್ಮ ಸಮುದಾಯವನ್ನು ಎಸ್ಟಿಗೆ ಸೇರಿಸಬೇಕೆಂಬ ಶಿಫಾರಸನ್ನು ಕೇಂದ್ರಕ್ಕೆ ಕಳುಹಿಸಬೇಕು. ಸಮುದಾಯದ ಎಲ್ಲರೂ ಈಗಾಗಲೇ ಈ ಕುರಿತು ಬೇಡಿಕೆಯನ್ನು ಇಟ್ಟಿದ್ದೇವೆ. ಸರ್ಕಾರ ನಮ್ಮ ಭರವಸೆಯನ್ನು ಈಡೇರುಸುತ್ತದೆ ಎಂಬ ನಿರೀಕ್ಷೆ ಇದೆ ಎಂದು ನಿರಂಜನಾನಂದ ಸ್ವಾಮೀಜಿಗಳು ತಿಳಿಸಿದ್ದಾರೆ.
“ಎಸ್ಟಿ ನಮ್ಮ ಹಕ್ಕು” ಹೆಸರಿನೆ ಕುರುಬ ಸಮುದಾಯದ ಬೃಹತ್ ಸಮಾವೇಶ ನಡೆಯಲಿದ್ದು, ಮನೆಗೊಬ್ಬ ರಾಯಣ್ಣ, ಸಮಾವೇಶಕ್ಕೆ ಬಾರಣ್ಣ ಎನ್ನುವ ಶ್ರೀಗಳ ಕರೆಯಂತೆ ಸುಮಾರು ಹತ್ತು ಲಕ್ಷ ಜನ ಕುರುಬ ಸಮುದಾಯದವರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಜನವರಿ 15 ರಂದು ಕಾಗಿನೆಲೆಯಿಂದ ಪಾದಯಾತ್ರೆ ಪ್ರಾರಂಭವಾಗಿ ಫೆಬ್ರವರಿ 4 ರಂದು ಬೆಂಗಳೂರಿನ ಅಣ್ಣಮ್ಮ ದೇವಾಲಯದಲ್ಲಿ ಪಾದಯಾತ್ರೆ ಸಮಾಪ್ತಿ ಮಾಡಲಾಯಿತು. ಇನ್ನೂ ನಾಳೆ ನಡೆಯುವ ಸಮಾವೇಶದಲ್ಲಿ ನಿರಂಜನಾನಂದ ಶ್ರೀಗಳು ನೇತೃತ್ವದಲ್ಲಿ ಸಚಿವ ಈಶ್ವರಪ್ಪ ಹಾಗೂ ಮಾಜಿ ಸಚಿವ ಹೆಚ್ಎಂ ರೇವಣ್ಣ ಸಾರಥ್ಯ ವಹಿಸಲಿದ್ದಾರೆ. ಸಮಾವೇಶದಲ್ಲಿ ಭಾಗವಹಿಸುವವರಿಗಾಗಿ 15 ಲಕ್ಷ ರೊಟ್ಟಿ, 60 ಸಾವಿರ ಲೀಟರ್ ಮೊಸರು ಸೇರಿದಂತೆ ವಿವಿದ ಖಾದ್ಯಗಳನ್ನ ತಯಾರಿಸಲಾಗಿದೆ.