ನವದೆಹಲಿ: ಇಲ್ಲಿನ ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ವೇಳೆ ಸೋನಿಯಾ ಗಾಂಧಿ ವಂದೇ ಮಾತರಂನ ಪೂರ್ಣ ಆವೃತ್ತಿಯನ್ನು ಹಾಡಲು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ಸಂಸದ ಸುಧಾಂಶು ತ್ರಿವೇದಿ, ವಂದೇ ಮಾತರಂ ಗೀತೆಯನ್ನು ಸಂಪೂರ್ಣವಾಗಿ ಹಾಡಲಾಗುತ್ತಿರುವ ಮೊದಲ ಸ್ವಾತಂತ್ರ್ಯ ದಿನ ಇದು. ಕಾಂಗ್ರೆಸ್ ಕಚೇರಿಯಲ್ಲಿ ವಂದೇ ಮಾತರಂ ಹಾಡುತ್ತಿದ್ದಾಗ, ಪಕ್ಷದ ನಾಯಕಿ ಸೋನಿಯಾ ಗಾಂಧಿ, ‘ಸೂಪರ್-ಪ್ರೆಸಿಡೆಂಟ್’ ರಾಹುಲ್ ಗಾಂಧಿ ಮತ್ತು ಪ್ರಸ್ತುತ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪರಸ್ಪರ ಮಾತನಾಡುತ್ತಾ ಸನ್ನೆ ಮಾಡುತ್ತಾ ಅತ್ಯಂತ ವಿಚಿತ್ರ, ಆಕ್ಷೇಪಾರ್ಹ ಮತ್ತು ಅಗೌರವ ತೋರುವ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಇನ್ನೂ ಕಾಂಗ್ರೆಸ್ಗೆ ವಂದೇ ಮಾತರಂನ್ನು ಸ್ವೀಕರಿಸಲು ಸಾಧ್ಯವಾಗಿಲ್ಲ ಎಂದು ಇದು ಸೂಚಿಸುತ್ತದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ, ಹಾಡು ಆರಂಭಿಕ ಚರಣಗಳನ್ನು ಮೀರಿ ಹಾಡಿದ ನಂತರ ಸೋನಿಯಾ ಗಾಂಧಿಯವರು ಅಸಮಾಧಾನಗೊಂಡಂತೆ ಕಾಣಿಸುತ್ತಿದೆ ಎಂದು ಟೀಕಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಂದೇ ಮಾತರಂನ ಪೂರ್ಣ ಆವೃತ್ತಿಯನ್ನು ಹಾಡಲಾಗಿದೆ. ಈ ವೇಳೆ, ಸೋನಿಯಾ ಗಾಂಧಿಯವರು ಸ್ವಲ್ಪ ಸಮಯದಿಂದ ನಿಂತಿದ್ದ ಖರ್ಗೆಯವರಿಗೆ ಕುರ್ಚಿಯನ್ನು ಕೇಳುತ್ತಿದ್ದಾರೆ ಎಂದು ಹೇಳಿಕೊಂಡಿದೆ.
ವಂದೇ ಮಾತರಂಗೆ ಅಟ್ಟಿ
1875 ರಲ್ಲಿ ಬಂಕಿಮ್ ಚಂದ್ರ ಚಟರ್ಜಿ ಬರೆದ ವಂದೇ ಮಾತರಂನ ಮೊದಲ ಎರಡು ಚರಣಗಳನ್ನು 1937 ರಲ್ಲಿ ರಾಷ್ಟ್ರೀಯ ಗೀತೆಯಾಗಿ ಅಂಗೀಕರಿಸಲಾಯಿತು. ಹಿಂದೂ ದೇವತೆಗಳ ಉಲ್ಲೇಖಗಳನ್ನು ಹೊಂದಿರುವ ನಾಲ್ಕು ಇತರ ಚರಣಗಳನ್ನು ಬಿಟ್ಟುಬಿಡಲಾಯಿತು. 2026ರ ಫೆಬ್ರವರಿಯಲ್ಲಿ, ಕೇಂದ್ರ ಸರ್ಕಾರ ಸಾರ್ವಜನಿಕ ಸಭೆಗಳು, ಶಾಲೆಗಳು ಮತ್ತು ಅಧಿಕೃತ ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಅನ್ನು ಸಂಪೂರ್ಣವಾಗಿ ಹಾಡುವುದನ್ನು ಕಡ್ಡಾಯಗೊಳಿಸಿತು.
ಜುಲೈ 30 ರಂದು ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆ (ತಿದ್ದುಪಡಿ) ಮಸೂದೆ, 2026 ಮಸೂದೆಯನ್ನು ಸಂಸತ್ತು ಅಂಗೀಕರಿಸಿತ್ತು. ಆ.11 ರಂದು ಮಸೂದೆಗೆ ರಾಷ್ಟ್ರಪತಿಗಳು ಸಹಿ ಹಾಕಿದ್ದರು. ಈಗ ಉದ್ದೇಶಪೂರ್ವಕವಾಗಿ ವಂದೇ ಮಾತರಂ ಹಾಡುವುದನ್ನು ತಡೆಯುವುದು ಅಪರಾಧವಾಗಿ ಪರಿಗಣಿಸಲಾಗುತ್ತದೆ.
Laxmi News 24×7