ಬೆಂಗಳೂರು : ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ತಮಿಳುನಾಡು ಉಸ್ತುವಾರಿ ಸಿ.ಟಿ. ರವಿ ಅವರು ತಮಿಳುನಾಡು ಚುನಾವಣೆ ಹಿನ್ನೆಲೆಯಲ್ಲಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಉದಯವಾಣಿಯೊಂದಿಗೆ ಮಾತನಾಡಿದ್ದಾರೆ.
– ತಮಿಳುನಾಡಿನಲ್ಲಿ ಶೂನ್ಯದಿಂದ ಪಕ್ಷ ಕಟ್ಟಲು ಹೋಗಿದ್ದೀರಿ, ಪರಿಸ್ಥಿತಿ ಹೇಗಿದೆ?
ಅಲ್ಲಿ ಪಕ್ಷ ಕಟ್ಟಲು ಶ್ರಮಿಸುತ್ತಿರುವ ಕಾರ್ಯಕರ್ತರಿದ್ದಾರೆ. ರಿಸಲ್ಟ್ ಬಂದಿಲ್ಲ ಅಂತ ಶೂನ್ಯ ಎಂದು ಹೇಳಲಾಗದು. ಈ ಬಾರಿ ಎರಡಂಕೆಯ ಶಾಸಕರನ್ನು ನಾವು ವಿಧಾನಸಭೆಗೆ ಕಳುಹಿಸುವುದು ಖಚಿತ.
– ಏಕಾಂಗಿಯಾಗಿ ಚುನಾವಣೆ ಎದುರಿಸುತ್ತೀರಾ ?
ಇಲ್ಲ. ಈಗಾಗಲೇ ಅಲ್ಲಿನ ಎಐಎಡಿಎಂಕೆ ಮುಖಂಡರು ಕೇಂದ್ರ ಗೃಹ ಸಚಿವ ಅಮಿತ್ ಶಾ ಜತೆಯಲ್ಲಿ ಎನ್ಡಿಎಯೊಂದಿಗೆ ಇರುತ್ತೇವೆ ಎಂದು ಹೇಳಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೂ ಎಐಎಡಿಎಂಕೆ ಜೊತೆ ಹೋಗು ತ್ತೇವೆ ಎಂದಿದ್ದಾರೆ. ಸೀಟು ಹಂಚಿಕೆ ಇನ್ನಷ್ಟೇ ಆಗಬೇಕು.
– ಮುಖ್ಯಮಂತ್ರಿ ವಿಚಾರದಲ್ಲಿ ನಿಮಗೂ ಅವರಿಗೂ ಗೊಂದಲ ಇದೆಯಲ್ಲ?
ಹಾಗೇನಿಲ್ಲ. ಯಾರು ಪ್ರಮುಖ ಪಾತ್ರ ವಹಿಸುತ್ತಾರೋ ಅವರೇ ಮುಖ್ಯಮಂತ್ರಿ ಆಗುತ್ತಾರೆ. ಕೇಂದ್ರದಲ್ಲಿ ನಮ್ಮದು ಎನ್ಡಿಎಯಲ್ಲಿ ದೊಡ್ಡ ಪಕ್ಷ ನಾವು ಪ್ರಧಾನಿ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದೇವೆ ಎನ್ಡಿಎ ಮಿತ್ರ ಪಕ್ಷಗಳು ಬೆಂಬಲ ನೀಡಿವೆ. ಅದೇ ರೀತಿ ತಮಿಳುನಾಡಿನಲ್ಲಿ ಎಐಎಡಿಎಂಕೆ ತೀರ್ಮಾನ ಮಾಡಿರುವುದಕ್ಕೆ ಬಿಜೆಪಿ ಬೆಂಬಲ ಸೂಚಿಸಿದೆ.
– ತಮಿಳರಿಗೆ ರಾಜ್ಯ ಮೊದಲು, ನಿಮ್ಮದು ರಾಷ್ಟ್ರ ಮೊದಲು ಅವರನ್ನು ಹೇಗೆ ಬದಲಾಯಿಸುತ್ತೀರಿ?
ನಾವಿನ್ನೂ ಸ್ವಲ್ಪ ವಿಸ್ತಾರವಾಗಿದ್ದೇವೆ. ರಾಜ್ಯಗಳನ್ನು ಬಿಟ್ಟು ರಾಷ್ಟ್ರ ಆಗುವುದಿಲ್ಲ. ರಾಜ್ಯವೊಂದನ್ನು ಇಟ್ಟುಕೊಂಡು ರಾಷ್ಟ್ರ ಎನ್ನೋಕೆ ಆಗಲ್ಲ. ರಾಜ್ಯವನ್ನು ಇಟ್ಟುಕೊಂಡು ರಾಷ್ಟ್ರ ಕಟ್ಟುತ್ತೇವೆ. ದೇಶದ ಹಿತಾಸಕ್ತಿಯ ಜತೆಗೆ ತಮಿಳುನಾಡು, ಕರ್ನಾಟಕ ಎಲ್ಲ ರಾಜ್ಯಗಳ ಹಿತ ಕಾಯುತ್ತೇವೆ.