ಬೆಂಗಳೂರು: ‘ಗಣಿಗಾರಿಕೆಯನ್ನು ವೈಜ್ಞಾನಿಕವಾಗಿ ನಡೆಸುವಂತೆ ಸಾಧ್ಯವಾಗಲು ರಾಜ್ಯದಲ್ಲಿ ಗಣಿ ವಿಶ್ವವಿದ್ಯಾಲಯ ಸ್ಥಾಪಿಸುವ ಚಿಂತನೆ ಇದೆ. ಈ ಬಗ್ಗೆ ಮುಖ್ಯಮಂತ್ರಿಯವರ ಜೊತೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿ ಹೇಳಿದರು.
ವಿಧಾನ ಪರಿಷತ್ನಲ್ಲಿ ಮಂಗಳವಾರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಜಾರ್ಖಂಡ್ ಮಾದರಿಯಲ್ಲಿ ಈ ವಿಶ್ವವಿದ್ಯಾಲಯ ಸ್ಥಾಪಿಸಲಾಗುವುದು’ ಎಂದರು.
‘ಖನಿಜ ಅಭಿವೃದ್ಧಿ ನಿಧಿ ಮತ್ತು ಗಣಿಗಳಿಂದ ಬರುವ ಬಡ್ಡಿ ಹಣವನ್ನು ಬಳಸಿ ಈ ವಿಶ್ವವಿದ್ಯಾಲಯ ನಿರ್ಮಿಸುವ ಉದ್ದೇಶವಿದೆ. ಸರ್ಕಾರದ ಹಣವನ್ನು ಇದಕ್ಕೆ ಬಳಸುವುದಿಲ್ಲ’ ಎಂದೂ ಅವರು ತಿಳಿಸಿದರು.
‘ಕಟ್ಟಡ ನಿರ್ಮಾಣ ಕಾರ್ಯಕ್ಕೆ ಉಸುಕು ಮತ್ತು ಜಲ್ಲಿ ಅವಶ್ಯಕವಾಗಿದೆ. ಕಾನೂನು ವ್ಯಾಪ್ತಿಯಲ್ಲಿ ಇವುಗಳ ಸಾಗಣೆಗೆ ಅನುಮತಿ ನೀಡಲಾಗುವುದು. ಗ್ರಾಮಗಳಲ್ಲಿನ ಹಳ್ಳಗಳಿಂದ ಮರಳನ್ನು ಬಂಡಿ ಮತ್ತು ಟ್ರ್ಯಾಕ್ಟರ್ಗಳಲ್ಲಿ ಸಾಗಿಸಿದರೆ, ಆಯಾ ಗ್ರಾಮ ಪಂಚಾಯಿತಿ ಅಥವಾ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ನಿಗದಿ ಪಡಿಸಿರುವ ತೆರಿಗೆ ಮಾತ್ರ ವಿಧಿಸಲಾಗುತ್ತದೆ. ಟಿಪ್ಪರ್ಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮರಳು ಸಾಗಿಸಿದರೆ ದಂಡ ಮತ್ತು ರಾಜಸ್ವ ಸಂಗ್ರಹಿಸಲಾಗುವುದು’ ಎಂದೂ ಹೇಳಿದರು.