ಬೆಂಗಳೂರು, ಜ.9- ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಡುವ ಉದ್ದೇಶದಿಂದ ಶಿಕ್ಷಣ ಇಲಾಖೆ ಜ.11ರಿಂದ ಆಕಾಶವಾಣಿ ಮೂಲಕ ಕಲಿಯುತ್ತಾ ನಲಿಯೋಣ ಎಂಬ ಹೊಸ ಕಾರ್ಯಕ್ರಮವನ್ನು ಬಿತ್ತರಿಸಲಿದೆ ಎಂದು ಶಿಕ್ಷಣ ಸಚಿವ ಸುರೇಶ್ಕುಮಾರ್ ತಿಳಿಸಿದ್ದಾರೆ. ಒಂದನೇ ತರಗತಿಯಿಂದ ನಾಲ್ಕನೇ ತರಗತಿಯವರೆಗೆ ಇರುವ (ಆದರೆ ಶಾಲೆಗೆ ಹೋಗಲಾರದ) ಮಕ್ಕಳಿಗಾಗಿ ಇರುವ ನಲಿಕಲಿ ಮತ್ತು ಕಲಿನಲಿ ಕಾರ್ಯಕ್ರಮಗಳನ್ನು ಜ.11ರಿಂದ ಏ.5ರವರೆಗೆ ಆಕಾಶವಾಣಿಯಲ್ಲಿ ಪ್ರಸಾರ ಮಾಡಲಾಗುವುದು ಎಂದು ಅವರು ಹೇಳಿದರು.
ಸೋಮವಾರದಿಂದ ಶುಕ್ರವಾರದವರೆಗೂ ಪ್ರತಿ ನಿತ್ಯ ಬೆಳಿಗ್ಗೆ 10 ಗಂಟೆಯಿಂದ 10.15ರವರೆಗೆ ಒಂದು ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳಿಗೆ ಹಾಗೂ 10.15 ರಿಂದ 10.30 ಗಂಟೆಯವರೆಗೂ 3 ಮತ್ತು 4ನೇ ತರಗತಿಗಳಿಗಾಗಿ ಕಲಿಯುತ್ತಾ ನಲಿಯೋಣ ಕಾರ್ಯಕ್ರಮ ನಡೆಸಲಾಗುವುದು. ಹಾಡು, ಕಥೆ, ನಾಟಕ, ಸಂಭಾಷಣೆ, ಒಗಟು, ಮತ್ತು ವಿವಿಧ ಆಸಕ್ತಿಕರ ಕಾರ್ಯಕ್ರಮಗಳ ಮೂಲಕ ಆಯಾ ತರಗತಿಗಳ ಮಕ್ಕಳ ಕಲಿಕೆ ಮುಂದುವರಿಯುವಂತೆ ಮಾಡಲು ಶಿಕ್ಷಣ ಇಲಾಖೆ ಈ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಅವರು ವಿವರಿಸಿದ್ದಾರೆ.
ಈ ಕಾರ್ಯಕ್ರಮಗಳ ಮೂಲಕ ನಲಿ-ಕಲಿಯ ಆಶಯಗಳಾದ ಆಲಿಸುವಿಕೆ, ವಸ್ತು ಗುರುತಿಸುವಿಕೆ, ಸ್ವ ಕಲಿಕೆ, ಸಂತಸದಾಯಕ ಕಲಿಕೆ, ಶಬ್ದ ಪರಿಚಯ ಹೀಗೆ ಶಬ್ದಗಳ ಏರಿಳಿತದ ಮೂಲಕ ವಿಷಯಗಳನ್ನು ವಿನೂತನ ಮಾದರಿಯಲ್ಲಿ ತಿಳಿಸಲಾಗುತ್ತದೆ. ಒಂದರಿಂದ ನಾಲ್ಕನೇ ತರಗತಿಯವರೆಗೆ ಓದುತ್ತಿರುವ ಮಕ್ಕಳ ಎಲ್ಲಾ ಪೋಷಕರಿಗೆ ಈ ಕಾರ್ಯಕ್ರಮವನ್ನು ಮಕ್ಕಳೊಂದಿಗೆ ಆಲಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ಪ್ರಸಾರಗೊಳ್ಳುವ ಹಾಡು, ಕಥೆ ಇತ್ಯಾದಿಗಳನ್ನು ನಿಮ್ಮ ಮಕ್ಕಳಿಗೆ ಹೇಳುವುದು ಹಾಗೂ ಮತ್ತೊಮ್ಮೆ ಹೇಳಿಸುವ ಮೂಲಕ ಮಕ್ಕಳಿಗೆ ನಲಿಯುವುದರ ಜೊತೆಗೆ ಕಲಿಯುವುದನ್ನು ಅಭ್ಯಾಸ ಮಾಡಿಸಿ. ಮಕ್ಕಳು ಹೇಳಿದ ಕತೆಗಳೂ ಪ್ರಸಾರ : ತಮ್ಮ ಮಕ್ಕಳಿಂದ ಯಾವುದಾದರೂ ಕತೆ ಹಾಡು ಒಗಟು ಹೇಳಬಹುದಾದರೆ ಅದನ್ನು ಮೊಬೈಲ್ ಸಂಖ್ಯೆ 9449417612ಗೆ ವ್ಯಾಟ್ಸ್ ಆ್ಯಪ್ ಮಾಡಿದರೆ ಅದನ್ನು ಪ್ರಸಾರ ಮಾಡಲಾಗುವುದು.