ಚಿಕ್ಕಮಗಳೂರು(ಜ.04): ರಾತ್ರಿ ಆರತಕ್ಷತೆಗೆ ಇದ್ದ ವರ ಬೆಳಗ್ಗೆ ಪ್ರೀತಿಸಿದ ಯುವತಿ ಬೆದರಿಕೆಗೆ ಹೆದರಿ ಮುಹೂರ್ತಕ್ಕೆ ನಾಪತ್ತೆಯಾಗಿ, ಮಧುಮಗಳಾಗಿ ನಿಂತಿದ್ದ ಯುವತಿಯನ್ನ ಬೆಂಗಳೂರಿನ ಬಿಎಂಟಿಸಿ ಬಸ್ ಕಂಡಕ್ಟರ್ ಕೈ ಹಿಡಿದ ಅಪರೂಪದ ಮದುವೆಗೆ ತರೀಕೆರೆ ಸಾಕ್ಷಿಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ದೋರನಾಳು ಗ್ರಾಮದ ಅಶೋಕ್ ಹಾಗೂ ನವೀನ್ ಎಂಬ ಅಣ್ಣತಮ್ಮಂದಿರಿಗೆ ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ ಹೆಣ್ಣಿನೊಂದಿಗೆ ಮದುವೆ ನಿಶ್ಚಯವಾಗಿತ್ತು. ಎರಡು ಕಡೆಯವರು ಒಪ್ಪಿ ಕೂಡ ಮದುವೆ ನಿಶ್ಚಯ ಮಾಡಿದ್ರು. ಅದರಂತೆ ಶನಿವಾರ ರಾತ್ರಿ ತರೀಕೆರೆ ಪಟ್ಟಣದ ಶೃಂಗೇರಿ ಶಾರದ ಭವನದಲ್ಲಿ ಎರಡು ಜೋಡಿಗೂ ರಿಸೆಪ್ಷನ್ ಕೂಡ ನಡೆದಿತ್ತು. ಬೆಳ್ಳಿಗೆ ಮೂಹರ್ತಕ್ಕೆ ರೆಡಿಯಾಗುವಷ್ಟರಲ್ಲಿ ನವೀನ್ ಎಂಬ ವರ ನಾಪತ್ತೆಯಾಗಿದ್ದ. ವಧುವಿನ ಕಡೆಯವರು ವರನ ನಾಪತ್ತೆ ಕಂಡು ಆತಂಕಗೊಂಡಿದ್ದರು. ಈ ವೇಳೆ ಅಲ್ಲೇ ಇದ್ದ ಯುವಕನೋರ್ವ ಆ ಯುವತಿಗೆ ಮದುವೆಯಾಗಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಹೌದು ನವೀನ್ ಅಣ್ಣ ಅಶೋಕ್ ಮದುವೆ ದಾವಣಗೆರೆ ಮೂಲದ ಯುವತಿಯೊಂದಿಗೆ ಮುಗಿದಿದೆ. ಆದರೆ, ನವೀನ್ ಮದುವೆಯಾಗಬೇಕಿದ್ದ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಸರಪನಹಳ್ಳಿಯ ಯುವತಿ ಸಿಂಧುವನ್ನ ಛತ್ರದಲ್ಲೇ ನೋಡಿ ಬೆಂಗಳೂರಿನ ಬಿ.ಎಂ.ಟಿ.ಸಿ. ಕಂಡಕ್ಟರ್ ಚಂದ್ರು ಎಂಬುವರು ಮದುವೆಯಾಗಿ ಮಾನವೀಯತೆ ತೋರಿದ್ದಾರೆ.