ಹನೂರು, ಡಿ.25- ತಾಲ್ಲೂಕಿನ ಶ್ರೀ ಕ್ಷೇತ್ರ ಮಲೈ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ ನಡೆದಿದ್ದು, 42 ದಿನಗಳಲ್ಲಿ 1.92 ಕೋಟಿ ರೂ. ನಗದು ಸಂಗ್ರಹವಾಗಿದ್ದು, ಚಿನ್ನ ಮತ್ತು ಬೆಳ್ಳಿ ಸಂಗ್ರಹಣೆಯಲ್ಲಿ ದೇವಸ್ಥಾನದ ಇತಿಹಾಸದಲ್ಲಿ ಐತಿಹಾಸಿಕ ದಾಖಲೆ ನಿರ್ಮಿಸಿದೆ. ಮ.ಬೆಟ್ಟದ ಖಾಸಗಿ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣದಲ್ಲಿ ಜರುಗಿದ ಹುಂಡಿ ಎಣಿಕೆ ಕಾರ್ಯವು ಸಾಲೂರು ಬೃಹನ್ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿಗಳ ಸಮಕ್ಷಮದಲ್ಲಿ ನಡೆಯಿತು.
ಭಕ್ತಾದಿಗಳು ಹರಕೆ ರೂಪದಲ್ಲಿ ಸಲ್ಲಿಸಿದ ಕಾಣಿಕೆ 42 ದಿನಗಳಲ್ಲಿ ಸಂಗ್ರಹವಾಗಿದ್ದ ಮಾದಪ್ಪನ ಹುಂಡಿಯಲ್ಲಿ 1,92,67,983ರೂ. ನಗದು, 170 ಗ್ರಾಂ. ಚಿನ್ನ ಮತ್ತು 3,850 ಕೆಜಿ ಬೆಳ್ಳಿಯ ಪದಾರ್ಥಗಳು ಸಂಗ್ರಹವಾಗಿದೆ ಹಾಗೂ ಕೊರೊನಾ ನಂತರ ಅತ್ಯಧಿಕ ಮೊತ್ತವಾಗಿದೆ.
ಕೊರೊನಾ ನಂತರ ಮಾದಪ್ಪನ ಹುಂಡಿಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಬೆಳಗ್ಗೆ 7 ಗಂಟೆಗೆ ಪ್ರಾರಂಭವಾದ ಹುಂಡಿ ಹಣ ಎಣಿಕೆ ಕಾರ್ಯವು ರಾತ್ರಿ 7ರ ವರೆಗೂ ನಡೆಯಿತು.
ಈ ಸಂದರ್ಭದಲ್ಲಿ ಪೊಲೀಸ್ ಬಂದೋಬಸ್ತ್ ಮತ್ತು ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಇರಿಸಲಾಗಿತ್ತು. ಹುಂಡಿ ಎಣಿಕೆ ಪ್ರಕ್ರಿಯೆಯಲ್ಲಿ ಪ್ರಾಧಿಕಾರ ಕಾರ್ಯದರ್ಶಿ ಜಯವಿಭವಸ್ವಾಮಿ, ಉಪ ಕಾರ್ಯದರ್ಶಿ ಬಸವರಾಜು, ಅಭಿಯಂತರರು ಮತ್ತು ದೇವಾಲಯದ ಸಿಬ್ಬಂದಿ ವೀರಣ್ಣಾಚಾರ್, ಬ್ಯಾಂಕ್ ಮ್ಯಾನೇಜರ್ ಮತ್ತು ಮಲೆ ಮಹದೇಶ್ವರ ಬೆಟ್ಟದ ಪೊಲೀಸ್ ಸಿಬ್ಬಂದಿ ಹಾಜರಿದ್ದರು.