ನವದೆಹಲಿ,ಡಿ.25-ರಾಷ್ಟ್ರಪತಿ ರಾಮಾನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯರು ಮಾಜಿ ಪ್ರಧಾನಿ ದಿವಂಗತ ಅಟಲ್ ಬೀಹಾರಿ ವಾಜಪೇಯಿ ಅವರಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ.
ವಾಜಪೇಯಿ ಸ್ಮರಣಾರ್ಥ ಏರ್ಪಡಿಸಿದ್ದ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವರುಗಳು ಕೇಸರಿ ಪಕ್ಷದಿಂದ ದೇಶದ ಮೊಟ್ಟ ಮೊದಲ ಪ್ರಧಾನಮಂತ್ರಿ ಎಂಬ ಕೀರ್ತಿಗೆ ಪಾತ್ರರಾಗಿದ್ದ ವಾಜಪೇಯಿ ಅವರಿಗೆ ನಮನ ಸಲ್ಲಿಸಿದರು.
ಅಜಾತಶತ್ರು ವಾಜಪೇಯಿ ಅವರನ್ನು ಕುರಿತು ರಾಷ್ಟ್ರಪತಿ ಕೋವಿಂದ್ ಅವರು, ಸದೈವ ಅಟಲ್ ಎಂದು ಟ್ವೀಟ್ ಮಾಡಿ ನಮನ ಸಲ್ಲಿಸಿದ್ದಾರೆ. ದೇಶದ ಪ್ರಧಾನಿಯಾಗಿದ್ದಾಗ ಅಟಲ್ ಅವರು ತೆಗೆದುಕೊಂಡ ಕೆಲವು ಕಠಿಣ ನಿರ್ಧಾರಗಳಿಂದ ಇಂದು ದೇಶ ಹಲವಾರು ಕ್ಷೇತ್ರಗಳಲ್ಲಿ ಅಭಿವೃದ್ಧಿಹೊಂದಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಜನ ಸಮೂಹದ ನಾಯಕರಾಗಿದ್ದ ಅಟಲ್ ಅವರು ಕವಿ ಮನಸ್ಸಿನ ವ್ಯಕ್ತಿ ಎಂದು ಬಣ್ಣಿಸಿರುವ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು, ಕವನಗಳ ಗುಚ್ಛವನ್ನೇ ಟ್ವೀಟ್ ಮಾಡಿದ್ದಾರೆ. ಗೃಹ ಸಚಿವ ಅಮಿತ್ ಷಾ, ರಕ್ಷಣಾ ಸಚಿವ ರಾಜನಾಥ್ಸಿಂಗ್ ಸೇರಿದಂತೆ ಹಲವಾರು ಕೇಸರಿ ಪಕ್ಷದ ಮುಖಂಡರುಗಳು ಅಟಲ್ ಅವರ ಗುಣಗಾನ ಮಾಡಿದ್ದಾರೆ.