ಬೆಂಗಳೂರು: ವಾಯುಪಡೆ ವಿಂಗ್ ಕಮಾಂಡರ್ ಹಾಗೂ ವ್ಯಕ್ತಿ ನಡುವೆ ನಡೆದಿದ್ದ ಬೀದಿ ಕಾಳಗ ಸಂಬಂಧ ದೂರು, ಪ್ರತಿದೂರು ದಾಖಲಿಸಿಕೊಂಡಿರುವ ಬೈಯಪ್ಪನಹಳ್ಳಿ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಸದ್ಯ ಅಧಿಕಾರಿ ನಾಪತ್ತೆಯಾಗಿದ್ದು, ಆತನ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ.
ಭಾಷೆ ವಿಚಾರಕ್ಕಾಗಿ ತಮ್ಮ ಕಾರನ್ನು ಅಡ್ಡಗಟ್ಟಿ ಬೈಕ್ ಸವಾರ ವಿಕಾಸ್ ಕುಮಾರ್ ಎಂಬವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದ ವಿಂಗ್ ಕಮಾಂಡರ್ ಶೀಲಾದಿತ್ಯ, ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ತಮ್ಮ ಮೇಲೆ ಹಲ್ಲೆ ಮಾಡಿರುವುದಾಗಿ ಶೀಲಾದಿತ್ಯ ಅವರು ಪತ್ನಿ ಮೂಲಕ ಠಾಣೆಗೆ ದೂರು ನೀಡಿದ್ದರು.
ಹಲ್ಲೆ ಸಂಬಂಧ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಕಾಸ್ ಕುಮಾರ್ ಅವರನ್ನು ಬಂಧಿಸಿ ಠಾಣಾ ಜಾಮೀನಿನ ಮೇರೆಗೆ ಬಿಡುಗಡೆ ಮಾಡಿದ್ದರು. ಕೃತ್ಯ ನಡೆದ ಸ್ಥಳದ ಸಿಸಿಟಿವಿ ಪರಿಶೀಲಿಸಿದಾಗ ವ್ಯಕ್ತಿ ಮೇಲೆಯೇ ವಿಂಗ್ ಕಮಾಂಡರ್ ತೀವ್ರ ರೀತಿಯಲ್ಲಿ ಹಲ್ಲೆ ಮಾಡಿರುವುದು ಕಂಡುಬಂದಿತ್ತು. ಅಲ್ಲದೆ, ವಿಕಾಸ್ ಕುಮಾರ್ನನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದರು. ತನ್ನ ಬೈಕಿಗೆ ಟಚ್ ಮಾಡುವುದಲ್ಲದೆ, ಅಡ್ಡಗಟ್ಟಿ ತಮ್ಮ ಮೇಲೆ ಸುಳ್ಳು ದೂರು ನೀಡಿದ್ದಾರೆ ಎಂದು ವಿಕಾಸ್ ಹೇಳಿಕೆ ನೀಡಿದ್ದರು. ಈ ಸಂಬಂಧ ಪ್ರತಿದೂರು ದಾಖಲಿಸಿಕೊಂಡಿರುವ ಪೊಲೀಸರು ವಿಂಗ್ ಕಮಾಂಡರ್ಗಾಗಿ ಶೋಧ ನಡೆಸುತ್ತಿದ್ದಾರೆ.
ಭಾಷೆ ವಿಚಾರಕ್ಕೆ ಗಲಾಟೆಯಾಗಿಲ್ಲ: ಪೊಲೀಸರಿಂದ ಬಂಧನಕ್ಕೆ ಒಳಗಾಗಿ ಠಾಣಾ ಜಾಮೀನಿನ ಮೇರೆಗೆ ಹೊರಬಂದಿರುವ ಬೈಕ್ ಸವಾರ ವಿಕಾಸ್ ಕುಮಾರ್ ವಿಡಿಯೋ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಮೊದಲಿಗೆ ತನಗೆ ಬೆಂಬಲ ನೀಡಿದ ಮಾಧ್ಯಮಗಳು, ಕನ್ನಡ ಸಂಘಟನೆಗಳು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧನ್ಯವಾದ ಅರ್ಪಿಸಿದ್ಧಾರೆ.