ತುಮಕೂರು: ವಾಹನ ವಿಮೆ ಪಡೆಯುವ ದುರುದ್ದೇಶದಿಂದ ಕಾರು ಕಳ್ಳತನವಾಗಿದೆ ಎಂದು ಸುಳ್ಳು ದೂರು ಕೊಟ್ಟ ಕಾರು ಮಾಲೀಕನೇ ಈಗ ಬಂಧನವಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.ಆರೋಪಿಯನ್ನು ದೊಡ್ಡೇಗೌಡ ಎಂದು ಗುರುತಿಸಲಾಗಿದೆ. ಈತ ಆಂಧ್ರದ ಮಡಕಶಿರಾ ಮೂಲದವನಾಗಿದ್ದಾನೆ. ವಿಮೆ ಪಡೆಯಲು ಕಾರು ಕಳೆದು ಹೋಗಿದೆ ಎಂದು ಸುಳ್ಳು ದೂರು ಕೊಟ್ಟು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಈ ಪ್ರಕರಣ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಮಿಡಿಗೇಶಿ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಆರೋಪಿ ಕಳೆದ ಸೆಪ್ಟೆಂಬರ್ 21 ರಂದು ಮಿಡಿಗೇಶಿ ಠಾಣೆಗೆ ಬಂದು ಮಧುಗಿರಿ ಪಾವಗಡ ರಸ್ತೆಯ ನೀಲಿಹಳ್ಳಿ ರಸ್ತೆ ಬಳಿ ಮೂರು ಜನ ದುಷ್ಕರ್ಮಿಗಳು ಬಂದು ನನ್ನ ಇನ್ನೊವಾ ಕಾರು ಪಂಚರ್ ಆಗಿದೆ ಎಂದು ಕಾರು ಅಡ್ಡಗಟ್ಟಿ ನಿಲ್ಲಿಸಿ, ಹಲ್ಲೆ ನಡೆಸಿ ಕಾರು ಅಪಹರಿಸಿದ್ದಾರೆ ಎಂದು ದೂರು ನೀಡಿದ್ದನು. ದೂರುದಾರನ ಮೇಲೆ ಸಂಶಯಗೊಂಡ ಪೊಲೀಸರು ಈತನ ಚಲನವಲನ ಗಮನಿಸಿದ್ದಾರೆ. ನಂತರ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಈತನ ನಿಜಬಣ್ಣ ಬಯಲಾಗಿದೆ.
ಈ ಪ್ರಕರಣದಲ್ಲಿ ಕಾರು ಮಾಲೀಕ ದೊಡ್ಡೇಗೌಡನೇ ಆರೋಪಿಯಾಗಿದ್ದಾನೆ. ಕಾರು ಲೋನ್ ಜೊತೆಯಲ್ಲಿ ಮಣ್ಣಪುರಂ ಗೋಲ್ಡ್ ಲೋನ್ಸೇರಿ ಒಟ್ಟು 12 ಲಕ್ಷಸಾಲ ಮಾಡಿಕೊಂಡಿದ್ದಾನೆ. ಹೀಗಾಗಿ ಕಂತು ಕಟ್ಟಲಾಗದೇ ಸಮಸ್ಯೆಯಲ್ಲಿದ್ದನು. ಇನ್ಸೂರೆನ್ಸ್ ಕ್ಲೈಮ್ ಮಾಡುವ ದುರುದ್ದೇಶದಿಂದ ಕಾರನ್ನು ಆಂಧ್ರದ ರಂಗಾಪುರದಲ್ಲಿರುವ ತನ್ನ ಸಂಬಂಧಿಕರ ಮನೆಯಲ್ಲಿ ಬಚ್ಚಿಟ್ಟು ಕಳ್ಳತನವಾಗಿದೆ ಎಂದು ನಾಟಕವಾಡಿದ್ದ. ಅನುಮಾನಗೊಂಡ ಮಧುಗಿರಿ ಪೊಲೀಸರು ಈತನ ನಾಟಕ ಬಯಲು ಮಾಡಿ ಈಗ ಕಂಬಿಹಿಂದೆ ಕಳುಹಿಸಿದ್ದಾರೆ.