ಗೋಕಾಕ: ಘಟಪ್ರಭಾ ಬಲದಂಡೆ ಕಾಲುವೆಯಲ್ಲಿ ಅನಧಿಕೃತವಾಗಿ ಅಳವಡಿಸಿರುವ ಪೈಪ್ಲೈನ್ ಹಾಗೂ ಮೋಟಾರ್ಗಳನ್ನು ರೈತರು ಕೂಡಲೇ ಸ್ವಯಂಪ್ರೇರಿತವಾಗಿ ತೆರವುಗೊಳಿಸಬೇಕು. ಇಲ್ಲವಾದಲ್ಲಿ ಪೊಲೀಸ್ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಸೂಕ್ತ ಕಾನೂನು ಕ್ರಮವಹಿಸಲಿದ್ದಾರೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಎಚ್ಚರಿಸಿದರು.
ಗೋಕಾಕ ತಾಲೂಕಿನ ಕಪರಟ್ಟಿ ಕ್ರಾಸ್ ಬಳಿ ಗುರುವಾರ ಘಟಪ್ರಭಾ ಬಲದಂಡೆ ಕಾಲುವೆ ವ್ಯಾಪ್ತಿಯ ವಿವಿಧ ಗ್ರಾಮಗಳ ರೈತರ ಸಭೆಯಲ್ಲಿ ಮಾತನಾಡಿ, ಕಾಲುವೆ ಕೊನೆಯ ಭಾಗದ ರೈತರಿಗೂ ಸಮರ್ಪಕವಾಗಿ ನೀರು ತಲುಪಿಸುವ ಅಗತ್ಯವಿದೆ. ಎಲ್ಲ ರೈತರು ಸಹಕರಿಸಬೇಕು ಎಂದರು. ಸಿದ್ದಾಪುರ ಹಟ್ಟಿ, ಕಪರಟ್ಟಿ, ಬಿಲಕುಂದಿ, ಹೊನಕುಪ್ಪಿ, ಲಕ್ಷ್ಮೇಶ್ವರ, ತಪಸಿ, ಕೆಮ್ಮನಕೋಲ
ಸೇರಿದಂತೆ ವಿವಿಧ ಗ್ರಾಮಗಳ ಜಮೀನಿಗೆ ನೀರು ತಲುಪಿತ್ತಿಲ್ಲ. ಮುಖ್ಯ ಕಾಲುವೆಗೆ ಸುಮಾರು 2,200 ಕ್ಯೂಸೆಕ್ ನೀರು ಬಿಡುತ್ತಿದ್ದರೂ ಬೆಟಗೇರಿ, ಕೌಜಲಗಿ ಭಾಗದವರೆಗೆ ಕೇವಲ 1,500 ಕ್ಯೂಸೆಕ್ ನೀರು ತಲುಪುತ್ತಿದೆ. ಮಧ್ಯದಲ್ಲಿ ಪೈಪ್ಲೈನ್, ಮೋಟಾರ್ಗಳ ಮೂಲಕ ನೀರು ಮೇಲೆತ್ತುತ್ತಿರುವುದರಿಂದ ಕಾಲುವೆ ಕೊನೆಯ ಭಾಗದವರೆಗೆ ನೀರು ತಲುಪುತ್ತಿಲ್ಲ ಎಂದರು.
ಬೆಟಗೇರಿ, ಕುಲಗೋಡ ಮತ್ತು ಕೌಜಲಗಿ ಭಾಗದ ಕಾಲುವೆಗಳಲ್ಲಿ ನಿರಂತರ ನೀರು ಹರಿಸುವ ಪ್ರಯತ್ನ ಮಾಡಲಾಗುವುದು. ಬಾಗಲಕೋಟೆ ಜಿಲ್ಲೆಯ ರೈತರಿಗೂ ನೀರಿನ ಅಗತ್ಯವಿದ್ದು, ಅವರ ಬೇಡಿಕೆ ನ್ಯಾಯಸಮ್ಮತವಾಗಿದೆ. ಹಿಡಕಲ್ಲ ಜಲಾಶಯ ಭರ್ತಿಯಾದ ಬಳಿಕ ಶೀಘ್ರ ನೀರು ಹರಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.
ಹಿಡಕಲ್ಲ ಡ್ಯಾಂ ನೀರು ಬಳಕೆದಾರರ ಮಹಾಮಂಡಳ ಅಧ್ಯಕ್ಷ ಅಶೋಕ ಖಂಡ್ರಟ್ಟಿ, ಜಿಪಂ ಮಾಜಿ ಸದಸ್ಯರಾದ ಗೋವಿಂದ ಕೊಪ್ಪದ, ವಿಠ್ಠಲ ಸವದತ್ತಿ, ನೀರಾವರಿ ನಿಗಮದ ಎಇ ಎಚ್.ಎಸ್.ಕಾಖಂಡಕಿ, ರಘುರಾಮ ಹಾಗೂ ಲಕ್ಷ್ಮಣ ಮಸಗುಪ್ಪಿ, ಹೆಸ್ಕಾಂ ಎಇಇಗಳಾದ ಎಂ.ಎಸ್.ನಾಗನ್ನವರ, ಎಸ್.ಪಿ.ವರಾಳೆ, ಸಿಪಿಐಗಳಾದ ಶ್ರೀಶೈಲ ಬ್ಯಾಕೋಡ, ಎಚ್.ಡಿ.ಮುಲ್ಲಾ ಇತರರಿದ್ದರು.
Laxmi News 24×7