ದೇವನಹಳ್ಳಿ: ಸಮುದಾಯ ವಿರೋಧಿ ಮನಸ್ಥಿತಿಯ ಡಾ.ಕೆ.ಸುಧಾಕರ್ ಅಂಥವರು ಅಧಿಕಾರಕ್ಕೆ ಬಂದರೆ ಹಿಂದುಳಿದ ವರ್ಗಗಳ ಅವನತಿಗೆ ಕಾರಣವಾಗುತ್ತದೆ ಎಂದು ಹೊಸಕೋಟೆ ಬಿಜೆಪಿ ತಾಲ್ಲೂಕು ಅಧ್ಯಕ್ಷ ಜಯರಾಜ್ ಸ್ವಪಕ್ಷೀಯ ಅಭ್ಯರ್ಥಿ ವಿರುದ್ಧವೇ ಬಹಿರಂಗವಾಗಿ ಹರಿಹಾಯ್ದರು.
ತಿಗಳ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಗದಂತೆ ಸುಧಾಕರ್ ಷ್ಯಡಂತ್ರ ರೂಪಿಸಿದ್ದರು.
ಅವರದು ಕಿರುಕುಳ ನೀಡುವ ಮನಸ್ಥಿತಿ. ಅವರ ಧೋರಣೆಯಿಂದ ನಿಷ್ಠಾವಂತ ಕಾರ್ಯಕರ್ತರ ರಾಜಕೀಯ ಜೀವನ ಕೊನೆಗೊಳ್ಳುತ್ತದೆ ಎಂದು ದೂರಿದರು.
ಕರ್ನಾಟಕ ರಾಜ್ಯ ತಿಗಳರ ವಹ್ನಿಕುಲ ಕ್ಷತ್ರಿಯ ಸಂಘ ಭಾನುವಾರ ಪಟ್ಟಣದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಸಮುದಾಯ ಮುಖಂಡರ ಸಭೆಯಲ್ಲಿ ಅವರು
ಮಾತನಾಡಿದರು.
‘ಸಣ್ಣ ಸಮುದಾಯಗಳ ಮೇಲಿನ ಅಗೌರವ, ನಾಯಕರ ಬೆಳವಣಿಗೆ ಸಹಿಸದ ಮನಸ್ಥಿತಿಯ ಸುಧಾಕರ್ ಅವರನ್ನು ರಾಜಕೀಯ ಶಕ್ತಿಯಿಂದ ದೂರವಿಡಬೇಕು. ಕೇವಲ ಶಾಸಕರು, ಸಂಸದರನ್ನು ಗೆಲ್ಲಿಸಲು ಮಾತ್ರ ನಾವಿಲ್ಲ. ಸಮುದಾಯದ ಏಳಿಗೆಗೆ ನಮ್ಮವರನ್ನೇ ನಾಯಕರನ್ನಾಗಿಸಲು ಸಿದ್ಧರಿದ್ದೇವೆ ಎಂದು ಮನದಟ್ಟು ಮಾಡಿಕೊಡಬೇಕು’ ಎಂದು ಹೇಳಿದರು.
‘ಬಿಜೆಪಿ ನಿಷ್ಠಾವಂತ ಕಾರ್ಯಕರ್ತರಾಗಿದ್ದ ಹೂಡಿ ವಿಜಯ್ಕುಮಾರ್ ರಾಜಕೀಯ ಜೀವನ ಹಾಳು ಮಾಡಿ, ಹೊಂದಾಣಿಕೆ ರಾಜಕೀಯದಲ್ಲಿ ಸಮುದಾಯದ ನಂಬಿಕೆಯನ್ನು ಮಣ್ಣು ಪಾಲು ಮಾಡಿದ ಸುಧಾಕರ್ ರಾಜಕೀಯಕ್ಕೆ ಅರ್ಹರಲ್ಲ’ ಎಂದು ತಿಗಳರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೃಷ್ಣಮೂರ್ತಿ ಟೀಕಿಸಿದರು.