ಬೇಲೂರು (ಹಾಸನ ಜಿಲ್ಲೆ): ಇಲ್ಲಿನ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆಯುತ್ತಿದ್ದ ಮದುವೆಗೆ ಬಂದ ವಧುವಿನ ಪ್ರೇಮಿಯು ವರನಿಂದ ತಾಳಿ ಕಿತ್ತುಕೊಂಡ ಘಟನೆ ನಡೆಯಿತು. ನಂತರ, ಆತನೊಂದಿಗೇ ಮದುವೆ ನಿಗದಿಯಾಯಿತು.
ಬೇಲೂರಿನ ಯುವತಿ ಹಾಗೂ ಶಿವಮೊಗ್ಗ ನಿವಾಸಿ ಪ್ರಮೋದ್ಕುಮಾರ್ ಅವರ ಮದುವೆ ಏರ್ಪಾಡಾಗಿತ್ತು.ವರನು ವಧುವಿಗೆ ತಾಳಿ ಕಟ್ಟುವ ವೇಳೆ ಧಾವಿಸಿದ ಪ್ರೇಮಿ, ಹಾಸನದ ಗವೇನಹಳ್ಳಿಯ ನವೀನ್ ಎಂಬಾತ ತಾಳಿ ಕಿತ್ತಿಟ್ಟುಕೊಂಡ. ‘ನಾನು ಹಾಗೂ ಯುವತಿ ಪ್ರೀತಿಸುತ್ತಿದ್ದು, ನನಗೇ ಮದುವೆ ಮಾಡಿಕೊಡಬೇಕು’ ಎಂದು ವಾಗ್ವಾದಕ್ಕಿಳಿದ. ಗೊಂದಲದ ವಾತಾವರಣ ಸೃಷ್ಟಿಯಾಗಿದ್ದರಿಂದ, ಪೊಲೀಸರು ಸ್ಥಳಕ್ಕೆ ಬಂದು, ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು.
ವಧು-ವರನ ಕುಟುಂಬದವರ ನಡುವೆ ವಾಗ್ವಾದ ನಡೆಯಿತು. ನಂತರ ವರನು ಮದುವೆಯಾಗಲು ನಿರಾಕರಿಸಿ, ವಧುವಿಗೆ ನೀಡಿದ್ದ ಆಭರಣಗಳನ್ನು ವಾಪಸ್ ಪಡೆದು ನಿರ್ಗಮಿಸಿದರು.
ಯುವತಿ ಮತ್ತು ನವೀನ್ ಕುಟುಂಬದವರ ನಡುವೆಯೂ ಮಾತುಕತೆ ನಡೆಯಿತು. ಪೊಲೀಸರ ಮಧ್ಯಸ್ಥಿಕೆಯಲ್ಲಿ, ಎರಡು ತಿಂಗಳ ನಂತರ ಇಬ್ಬರಿಗೂ ಮದುವೆ ಮಾಡಲು ಹಾಗೂ ತಕ್ಷಣದಲ್ಲೇ ಕಾನೂನು ಪ್ರಕಾರ ನೋಂದಣಿ ಮಾಡಿಸಿ, ಮದುವೆ ಮಾಡಿಸಲು ಯುವತಿ ಪೋಷಕರು ಒಪ್ಪಿಗೆ ನೀಡಿದ ನಂತರ ಗೊಂದಲಕ್ಕೆ ತೆರೆ ಬಿದ್ದಿತು.