ಗೋಕಾಕ (ಬೆಳಗಾವಿ): ವಿಶ್ವ ಹಿಂದೂ ಪರಿಷತ್, ರಾಷ್ಟ್ರೀಯ ಸೇವಿಕಾ ಸಮಿತಿ ವತಿಯಿಂದ ನಗರದ ಲಕ್ಷ್ಮೀ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ರಾಮನಾಮ ಜಪ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆರವೇರಿತು.
ಮಹಿಳೆಯರಿಗಾಗಿ ಮಾತ್ರ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ 3,000 ಹೆಣ್ಣು ಮಕ್ಕಳು ಒಂದೇ ರೀತಿಯ ವೇಷಭೂಷಣದಲ್ಲಿ ಸೇರಿದರು.
‘ಶ್ರೀರಾಮ ಜಯರಾಮ ಜಯಜಯ ರಾಮ’ ಎಂಬ ನಾಮವನ್ನು 108 ಬಾರಿ ಜಪಿಸಿದರು. 108 ಸೆಟ್ಗಳನ್ನು ಒಟ್ಟು 11 ಬಾರಿ ಜಪ ಮಾಡಿದರು. ಏಕಕಾಲಕ್ಕೆ ಮಹಿಳೆಯರಿಂದ ಹೊರಬಂದ ರಾಮನಾಮ ಜಪದ ಸ್ವರಗಳು ಗಮನ ಸೆಳೆದವು.
ವೇದಿಕೆ ಮೇಲೆ ರಾಮನ ಭವ್ಯ ಮೂರ್ತಿ ಪ್ರತಿಷ್ಠಾಪಿಸಿ ಜಪ ಮಾಡಲಾಯಿತು. ಜತೆಗೆ ಮಹಿಳೆಯರ 11 ಭಜನಾ ತಂಡಗಳು ಕೂಡ ವಿವಿಧ ನಾಮಾವಳಿಗಳನ್ನು ಹಾಡಿದವು. ವಿವಿಧ ಶಾಲೆ- ಕಾಲೇಜು ಮಕ್ಕಳು ಕೂಡ ಸಾಂಸ್ಕೃತಿಕ ಕಾರ್ಯಕ್ರಮ ನೀಡಿ ಗಮನ ಸೆಳೆದರು.
ಮುಖಂಡರಾದ ಸೀತಾಬಾಯಿ ರಾಮಚಂದ್ರ ನಾಯಕ ಅವರು ದೀಪ ಬೆಳಗಿಸಿ, ರಾಮ ಪೂಜೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿದರು. ವಿಶ್ವ ಹಿಂದೂ ಪರಿಷತ್ ನಗರ ಘಟಕದ ಅಧ್ಯಕ್ಷ ಆನಂದ ಪಾಟೀಲ, ಉಪಾಧ್ಯಕ್ಷ ಸಂಜು ಚಿಪ್ಪಲಕಟ್ಟಿ, ಸತ್ಸಂಗ ಪ್ರಾಂತ ಪ್ರಮುಖ ನಾರಾಯಣ ಮಠಾಧಿಕಾರಿ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡರು.