ಬೆಂಗಳೂರು: ಬಿಜೆಪಿ (BJP) ನಾಯಕರು ಸಚಿವ ಜಮೀರ್ ಅಹ್ಮದ್ (Zameer Ahmed Khan) ಅವರ ವಿಮಾನದ ಬಗ್ಗೆ ಮಾತನಾಡುವ ಬದಲು ಪ್ರಧಾನಿ ನರೇಂದ್ರ ಮೋದಿಯವರಿಂದ (PM Narendra Modi) ರಾಜ್ಯಕ್ಕೆ ಬರ ಪರಿಹಾರ ಕೊಡಿಸಲಿ ಎಂದು ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ವಾಗ್ದಾಳಿ ನಡೆಸಿದ್ದಾರೆ.
ಸಚಿವ ಜಮೀರ್ ಅಹ್ಮದ್ ಖಾನ್ ಐಶಾರಾಮಿ ವಿಮಾನದಲ್ಲಿ ಹಾಡು ಹಾಕಿಕೊಂಡು ಹೋಗಿದ್ದಾರೆ ಎಂಬ ಬಿಜೆಪಿ ನಾಯಕರ ಟೀಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ನಾಯಕರು, ಚಿಕ್ಕ ಪುಟ್ಟ ಹಾಗೂ ದೊಡ್ಡ ನಾಯಕರು ಎಲ್ಲರೂ ಜಮೀರ್ ಅವರ ವಿಮಾನ ಪ್ರಯಾಣದ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಜಮೀರ್ ವಿಷಯ ಬಿಡಿ, ರಾಜ್ಯದಲ್ಲಿ ಬರಗಾಲ ಆಗಿ 223 ತಾಲೂಕು ಬರ ಎಂದು ಘೋಷಣೆ ಆಗಿದೆ. ಕೇಂದ್ರ ಬರ ಪರಿಹಾರ ಹಣ ಕೊಡಿಸುವ ಕೆಲಸವನ್ನು ಮೊದಲು ಬಿಜೆಪಿಗರು ಮಾಡಲಿ ಎಂದಿದ್ದಾರೆ.
ನಮ್ಮ ಮಂತ್ರಿಗಳು ಕೇಂದ್ರದ ನಾಯಕರ ಭೇಟಿಯಾಗಿ ಬರ ಪರಿಹಾರಕ್ಕೆ ಮನವಿ ಮಾಡಿದ್ದಾರೆ. ಯಾಕೆ ಪರಿಹಾರ ಬಿಡುಗಡೆ ಮಾಡಿಲ್ಲ? ಬಿಜೆಪಿ ನಾಯಕರು ನಿಮ್ಮ ಬಾಯಿಗೆ ಪ್ಲಾಸ್ಟರ್ ಹಾಕಿಕೊಂಡಿದ್ದೀರಾ ಎಂದು ಕಿಡಿಕಾರಿದ್ದಾರೆ. ಬಿಜೆಪಿಗರು, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರಿಗೆ ಪರಿಹಾರ ಕೊಡಿ ಎಂದು ಹೇಳುತ್ತಿಲ್ಲ. ಬಿಜೆಪಿಯವರ ನಿಯೋಗ ಹೋಗಿ ಪರಿಹಾರ ಕೇಳಲಿ, ಬರ ಪರಿಹಾರದ ಬಗ್ಗೆ ಕೇಳುವ ಧೈರ್ಯ ಇಲ್ಲ. ಇವರು ಜಮೀರ್ ಬಗ್ಗೆ ಮಾತಾನಾಡುತ್ತಾರೆ ಎಂದಿದ್ದಾರೆ.