ಧಾರವಾಡ: ಚಕ್ಕಡಿಯ ನೊಗ ಹೆಗಲ ಮೇಲಿಟ್ಟುಕೊಂಡು ಚಕ್ಕಡಿಯನ್ನೇ ಎಳೆದುಕೊಂಡು ಮುಸ್ಲಿಂ ಸಮುದಾಯ ವ್ಯಕ್ತಿಯೊಬ್ಬರು ಉಳವಿಯತ್ತ ಪ್ರಯಾಣವನ್ನು ಗುರುವಾರ ಆರಂಭಿಸಿದ್ದು, ಇದು ಈಗ ಎಲ್ಲರ ಗಮನ ಸೆಳೆದಿದೆ.
ಈ ಸಾಹಸಮಯ ಭಕ್ತಿಯ ಸಂಕಲ್ಪ ಕೈಗೊಂಡಿರುವುದು ಮಂಗಳಗಟ್ಟಿ ಗ್ರಾಮದ ಇಮಾಮ್ಸಾಬ್ ನದಾಫ್.
ಗರಗದ ಕಲ್ಮಠದ ಶ್ರೀಗಳೊಂದಿಗೆ ಗರಗ ಮಡಿವಾಳೇಶ್ವರ ಮಠದಿಂದ ಉಳವಿ ಚೆನ್ನಬಸವೇಶ್ವರ ದೇವಸ್ಥಾನಕ್ಕೆ ಏಳನೇ ವರ್ಷದ ಪಾದಯಾತ್ರೆಯನ್ನು ಆರಂಭಿಸಿದ್ದು, ಈ ಪಾದಯಾತ್ರೆ ಮೂಲಕ ಇಮಾಮ್ಸಾಬ್ ಗಮನ ಸೆಳೆಯುವಂತೆ ಮಾಡಿರುವುದು ವಿಶೇಷ.
ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವ ಇಮಾಮ್ಸಾಬ್ ಚಕ್ಕಡಿಯನ್ನು ಹೆಗಲ ಮೇಲಿಟ್ಟಕೊಂಡು ಉಳವಿ ಚೆನ್ನಬಸವೇಶ್ವರ ದೇವಸ್ಥಾನದತ್ತ ಪಾದಯಾತ್ರೆ ಕೈಗೊಂಡಿರುವ ಇಮಾಮ್ಸಾಬ್ ಅವರಿಗೆ ಮಂಗಳಗಟ್ಟಿ ಗ್ರಾಮದ ಯುವಕರಾದ ಮುತ್ತು ಬ್ಯಾಳಿ, ವಿಠ್ಠಲ ಕಮ್ಮಾರ, ಆನಂದ ಸಬರದ ಹಾಗೂ ಸಂತೋಷ ಬಾಗಣ್ಣವರ ಕೂಡ ಸಾಥ್ ನೀಡಿದ್ದಾರೆ.